Wednesday 11 April 2018

visuddhi magga ವಿಶುದ್ಧಿ ಮಾರ್ಗದ ಅಧ್ಯಾಯ 4 ಪಠವಿ ಕಸಿಣ ನಿದ್ದೇಸ

ಅಧ್ಯಾಯ 4ಪಠವಿ ಕಸಿಣ ನಿದ್ದೇಸ

ಸಮಾಧಿ ವಿಕಾಸಕ್ಕೆ ವಾಸಸ್ಥಳದ ತೊಂದರೆ ಇರಬಾರದು. ಆ ಕಾರಣಕ್ಕೆ ಭಿಕ್ಖುವು ಅನಾನುಕೂಲಿಯಾಗಿರುವ ವಿಹಾರವನ್ನು ತೊರೆದು ಅನುಕೂಲವಾಗಿರುವ ಸ್ಥಳವನ್ನು ಆಯ್ಕೆ ಮಾಡಬೇಕು. ಆದರೆ ಆ ಸ್ಥಳವು ಗುರುವಿನಿಂದ ಒಂದು ಯೋಜನದ ಒಳಗಿನ ಅಂತರದಲ್ಲಿದ್ದರೆ ಒಳಿತು. ಏಕೆಂದರೆ ಧ್ಯಾನದ ವಿಷಯವನ್ನು ಮರೆತರೆ, ನಡುವೆ ಉಂಟಾದ ಸಂದೇಹ ನಿವಾರಣೆಗೆ ಇತ್ಯಾದಿ. 

ವಿಹಾರದ 18 ದೋಷಗಳು:

1. ವಿಶಾಲವಾದ ವಿಹಾರ: ವಿಹಾರ ದೊಡ್ಡದಾಗಿದ್ದಷ್ಟೂ ಶಬ್ದಗಳು, ಹೆಚ್ಚುವರಿ ಕರ್ತವ್ಯಗಳು (ನೀರು ಹಾಕುವುದು, ಗುಡಿಸುವುದು ಇತ್ಯಾದಿ) ಇದ್ದು, ಸಮಾಧಿ ವಿಕಾಸಕ್ಕೆ ಅಡ್ಡಿಯಾಗುವುದು.
2. ಹೊಸ ವಿಹಾರ: ಹೊಸ ವಿಹಾರವಾಗಿರುವಾಗ ಅಲ್ಲಿ ಕಟ್ಟಡದ ಕಾಮಗಾರಿಗಳು ನಡೆಯುತ್ತಿರುತ್ತವೆ, ಭಾಗವಹಿಸದಿದ್ದರೆ ಪ್ರಾಪಂಚಿಕರು ನಿಂದಿಸುವರು, ಭಾಗವಹಿಸಲು ಇತರ ಭಿಕ್ಖುಗಳು ತಡೆಯುವರು, ಭಾಗವಹಿಸಿದರೆ ಧ್ಯಾನಕ್ಕೆ ಸಮಯ ದೊರೆಯದು.
3. ಶಿಥಿಲ ವಿಹಾರ: ಶಿಥಿಲವಾದ ವಿಹಾರದಲ್ಲಿ ದುರಸ್ತಿಕಾರಕ ಕೆಲಸಗಳು ಹೇರಳವಾಗಿರುತ್ತವೆ. ದುರಸ್ತಿ (ರಿಪೇರಿ) ಮಾಡಿಸದಿದ್ದರೆ ಪ್ರಾಪಂಚಿಕರು ಟೀಕಿಸುವರು, ಮಾಡಲು ಹೋದರೆ ಧ್ಯಾನವು ಸೊರಗುವುದು.
4. ದಾರಿಬದಿಯ ವಿಹಾರ: ದಾರಿಬದಿಯ ವಿಹಾರಕ್ಕೆ ಅಪಾರವಾಗಿ ಭೇಟಿ ನೀಡುವವರು ಬರುವರು. ಶಬ್ದಗಳು ವಿಪರೀತ. ಕೆಲವೊಮ್ಮೆ ಪರರಿಗಾಗಿ ವಸತಿ ನೀಡಬೇಕಾಗಿ ಬರುವುದು, ಧ್ಯಾನಕ್ಕೂ ಅವಕಾಶ ಸಿಗದಂತಾಗುವುದು.
5. ಕೊಳದ ಬಳಿ: ಕೊಳದ ಬಳಿ ವಾಸಿಸಿದರೆ ಅಲ್ಲಿ ಬಹಳಷ್ಟು ಜನರು ನೀರಿಗಾಗಿ ಬರುವರು, ಭಿಕ್ಖುಗಳ ಬಳಿಯೇ ಸಾಮಗ್ರಿಗಳನ್ನು ಕೇಳುವರು. ನಂತರ ಸರಿಯಾಗಿ ಹಿಂತಿರುಗಿಸುವುದಿಲ್ಲ. ಅವರ ಬಗ್ಗೆಯೇ ಎಚ್ಚರದಿಂದ ಇರಬೇಕಾಗುತ್ತದೆ. ಹೀಗಾಗಿ ಧ್ಯಾನ ಕುಂಠಿತವಾಗುವುದು.
6. ಸೊಪ್ಪುಗಳ ಬಳಿ: ಅಂತಹ ಕಡೆ ವಾಸಿಸಿದರೆ ತರಕಾರಿಯವರು ಎಲೆಯನ್ನು ಆಯುವವರು, ಸ್ತ್ರೀಯರು ಹೇರಳವಾಗಿ ಬರುವರು, ಶಬ್ದಗಳನ್ನು ಮಾಡುವರು, ಪರಿಣಾಮ ಧ್ಯಾನಕ್ಕೆ ತೊಂದರೆಯಾಗುವುದು.
7. ಹೂಗಿಡಗಳ ಬಳಿ: ಅಂತಹ ಕಡೆ ವಾಸಿಸಿದರೆ ಹೂಗಳನ್ನು ಕೀಳುವವರು, ಸ್ತ್ರೀಯರು ಹೇರಳವಾಗಿ ಬರುವರು, ಶಬ್ದಗಳನ್ನು ಮಾಡುವರು, ಪರಿಣಾಮ ಧ್ಯಾನಕ್ಕೆ ತೊಂದರೆಯಾಗುವುದು.
8. ಹಣ್ಣುಮರಗಳ ಬಳಿ: ಅಲ್ಲಿ ಪ್ರಾಪಂಚಿಕರು ಬಂದು ಹಣ್ಣುಗಳನ್ನು ಕೇಳುವರು, ಶಬ್ದಗಳನ್ನು ಮಾಡುವರು, ಹಣ್ಣುಗಳನ್ನು ನೀಡದಿದ್ದರೆ ಕೋಪ, ನಿಂದನೆ, ಭಿಕ್ಖುಗಳಿಗೆ ಹೊರಹಾಕುವಂತಹ ಪ್ರಯತ್ನ ನಡೆಸುತ್ತಾರೆ.
9. ಸುಖ್ಯಾತ ವಿಹಾರ: ಸುಖ್ಯಾತ ವಿಹಾರಗಳಾದ ದಕ್ಷಿಣಗಿರಿ, ಹತ್ಥಿಕುಚ್ಛಿ, ಚೇತಿಯಗಿರಿ ಅಥವಾ ಚಿತ್ತಲಾಪಬ್ಬತಗಳಂತಹ ವಿಹಾರಗಳಲ್ಲಿ ಜನರ ಭೇಟಿಯು ಅಪಾರವಾಗಿದ್ದು, ಧ್ಯಾನಕ್ಕೆ ತೊಂದರೆಯಾಗುವುದು.
10. ನಗರ ಸಮೀಪದ ವಿಹಾರ: ಅಲ್ಲಿ ಸ್ತ್ರೀಯರ ಆಗಮನ, ಜನರು ಬಂದು ಅಲ್ಲಿ ಮಾತುಕತೆ ನಡೆಸುವುದು, ಸಾಮಾನ್ಯವಾಗಿದ್ದು, ಧ್ಯಾನಕ್ಕೆ ತೊಂದರೆಯಾಗುವುದು.
11. ದಿಮ್ಮಿ ಮರಗಳ (ಬಡಗಿಗಳಿಗೆ ಸಹಾಯವಾಗುವಂತ) ಸಮೀಪದ ವಿಹಾರ: ಅಲ್ಲಿಗೆ ಬಡಗಿಗಳು ಹೇರಳವಾಗಿ ಬಂದು ಮರಗಳನ್ನು ಕತ್ತರಿಸಿಕೊಂಡು, ತೆಗೆದುಕೊಂಡು ಹೋಗುವರು, ವಿಹಾರದಲ್ಲೆಲ್ಲಾ ಅಡ್ಡಾಡುವರು, ಶಬ್ದ ಮಾಡುವರು. ಹೀಗಾಗಿ ಧ್ಯಾನಕ್ಕೆ ಹೆಚ್ಚು ತೊಂದರೆಯಾಗುವುದು.
12. ಕೃಷಿ ಯೋಗ್ಯ ಭೂಮಿಯ ಸಮೀಪದಲ್ಲಿ: ವಿಹಾರದ ಭೂಮಿಯಲ್ಲೇ ಕೆಲವರು ವ್ಯವಸಾಯ ಮಾಡುವರು ಅಥವಾ ಕೆರೆ ಕಟ್ಟರುವರು, ಶಬ್ದಗಳನ್ನು ಮಾಡುವರು, ಹಸುಗಳನ್ನು ಮೇಯಿಸುವರು, ಅವರಿಗೆ ಸಹಕರಿಸದಿದ್ದರೆ ಕಾಲುಕೆರೆದು ಜಗಳಕ್ಕೆ ಬರುವರು, ಅಧಿಕಾರಿಗೆ ಅಥವಾ ನ್ಯಾಯಾಲಯಕ್ಕೆ ದೂರ ಕೊಡುವರು.
13. ಹೊಂದಿಕೆಯಿಲ್ಲದವರ (ಅಕ್ಕಪಕ್ಕದವರು) ನಡುವೆ : ಕೆಲವರು ವಿಪರೀತ ದೃಷ್ಟಿಕೋನದವರಾಗಿದ್ದು, ದೈವಭಕ್ತರಾಗಿದ್ದು, ಸ್ವಲ್ಪಸ್ವಲ್ಪಕ್ಕೂ ಜಗಳಕ್ಕೆ ಬರುವವರಾಗಿದ್ದು, ಮನಃಶಾಂತಿಯೇ ನಷ್ಟವಾಗಿ ಧ್ಯಾನಕ್ಕೆ ಆಸಕ್ತಿಯಿಲ್ಲದಂತಾಗುತ್ತದೆ.
14. ಬಂದರಿನ ಸಮೀಪ: ಅದು ಬಂದರು ಆಗಿರಬಹುದು ಅಥವಾ ಪ್ರಯಾಣಿಕರ ತಂಗುದಾಣವಾಗಿರಬಹುದು. ಅಲ್ಲಿ ಸದಾ ಜನಜಂಗುಳಿ, ವಾಹನಗಳ, ಹಡಗುಗಳ ಶಬ್ದವೇ ಇರುತ್ತದೆ, ವಿಹಾರದೊಳಕ್ಕೂ ಜನರು ನುಗ್ಗಿ, ನೀರು, ವಸತಿ ಕೇಳುವರು. ನಿರಾಕರಿಸಿದರೆ ದ್ವೇಷ ಸಾಧಿಸುವುದು ನಡೆಯುವುದರಿಂದಾಗಿ ಧ್ಯಾನಕ್ಕೆ ಅಡ್ಡಿಯಾಗುವುದು.
15. ನೆರೆರಾಷ್ಟ್ರ (ರಾಜ್ಯ)ಗಳಲ್ಲಿ: ಅಲ್ಲಿನ ಜನರಿಗೆ ಬುದ್ಧರ ಬಗ್ಗೆ ಶ್ರದ್ಧೆ, ಗೌರವ ಇಲ್ಲದಿದ್ದರೆ ಭಿಕ್ಷುಗಳ ಬಗ್ಗೆಯೂ ಗೌರವ ಇಲ್ಲದಿದ್ದರೆ, ಅಲ್ಲಿ ವಾಸಿಸುವುದು ದುಷ್ಕರವಾಗುತ್ತದೆ.
16. ದೇಶದ ಗಡಿಭಾಗದಲ್ಲಿ: ಅಂತಹ ಸ್ಥಳದಲ್ಲಿ ಧ್ಯಾನ ಮಾಡುವುದಿರಲಿ, ವಾಸಿಸುವುದೇ ಅಪಾಯಕರವಾಗಿರುತ್ತದೆ. ನನ್ನ ಆಜ್ಞೆ ಪಾಲಿಸುತ್ತಿಲ್ಲ ಎಂದು ರಾಜನು ಅಥವಾ ಅಧಿಕಾರಿಗಳು ಕಿರುಕುಳ ನೀಡಲು ಆರಂಭಿಸುತ್ತಾರೆ. ಕೆಲವೊಮ್ಮೆ ಭಿಕ್ಖುಗಳನ್ನು ಗೂಡಾಚಾರಿಗಳೆಂದು ಸಂಶಯಿಸಿ ತೊಂದರೆಯನ್ನು ನೀಡುತ್ತಾರೆ.
17. ಯೋಗ್ಯವಲ್ಲದ ಅಪಾಯಕರ ಸ್ಥಳಗಳಲ್ಲಿ: ಸ್ತ್ರೀಯರು ಹೆಚ್ಚಾಗಿ ಸುಳಿದಾಡುವಂತಹ ಸ್ಥಳ ಅಥವಾ ಯಕ್ಷ ಯಕ್ಷಿಣಿಯರು (ನರಭಕ್ಷಕರು) ವಾಸಿಸುವಂತಹ ಸ್ಥಳಗಳಲ್ಲಿ ವಾಸಿಸಬಾರದು. ಅಲ್ಲಿ ಧ್ಯಾನಿಸುವುದು, ಪ್ರಾಣಕ್ಕೆ ಕುತ್ತಾಗುತ್ತದೆ.
18. ಕಲ್ಯಾಣಮಿತ್ರರ ಕೊರತೆ: ಗುರುವಿಗಿಂತ ಹೆಚ್ಚಿನ ಅಥವಾ ಸಮಾನದ ಕಲ್ಯಾಣಮಿತ್ರನಾಗಲಿ, ಮಿತ್ರನಾಗಲಿ ಸಿಗುವುದಿಲ್ಲ. ಅಂತಹವರ ಕೊರತೆಯಾಗುವ ಸ್ಥಳವು ಗಂಭೀರ ತಪ್ಪು ಎನಿಸುತ್ತದೆ.
ಇವಿಷ್ಟೂ ವಾಸಯೋಗ್ಯವಲ್ಲದ ವಿಹಾರದ ದೋಷಗಳಾಗಿವೆ
.
ಐದು ಅಂಗಗಳಿಂದ ಅನುಕೂಲಕರ ವಿಹಾರ
ಭಿಕ್ಷುವಿಗೆ ವಾಸಯೋಗ್ಯವಾಗಿರುವ ಅನುಕೂಲಕರವಾಗಿರುವ ಐದು ಅಂಗಗಳೆಂದರೆ:
1. ವಾಸಸ್ಥಳವು ಅತಿ ಹತ್ತಿರವೂ ಕೂಡದು ಹಾಗೆಯೇ ಅತಿ ದೂರವೂ ಇರಕೂಡದು ಹಾಗು ಹೋಗಿಬರುವಂತಹ ದಾರಿಯಿರಲಿ.
2. ಹಗಲಲ್ಲಿ ಅತಿ ಕಡಿಮೆ ಜನಸಂಚಾರದ ಸ್ಥಳವಾಗಿರಲಿ, ರಾತ್ರಿಯಲ್ಲಿ ಅತಿ ಕಡಿಮೆ ಶಬ್ದದ ಸ್ಥಳವಾಗಿರಲಿ.
3. ಆ ಸ್ಥಳವು ಕೀಟಗಳಿಂದ, ಚಳಿಯಿಂದ, ಬಿಸಿಲಿನಿಂದ ಹಾಗು ಸರಿಸೃಪಗಳಿಂದ, ಹಾವುಗಳಿಂದ ಮುಕ್ತವಾಗಿರಲಿ.
4. ವಾಸಸ್ಥಳದಲ್ಲಿ ಸುಲಭವಾಗಿ ಆಹಾರ, ಚೀವರ, ಔಷಧಿಗಳು ದೊರೆಯುವಂತಾಗಲಿ.
5. ಅಲ್ಲಿ ಹಿರಿಯರಾದಂತಹ ಧಮ್ಮ ವಿನಯ ಬಲ್ಲಂತಹ, ಜ್ಞಾನ ಪ್ರಕಾಶಿಸುವಂತಹ, ಸಂದೇಹ ದೂರ ಮಾಡುವಂತಹ ಜ್ಞಾನಿಗಳು ಇರಲಿ.

ಸಣ್ಣ ಪುಟ್ಟ ಅಡ್ಡಿಗಳು:

ಧ್ಯಾನಕ್ಕೆ ಅಡ್ಡಿಯಾಗುವಂತಹ ಸಣ್ಣಪುಟ್ಟ ಅಡ್ಡಿಗಳೆಂದರೆ: ಕ್ಷೌರ, ಶುಚಿತ್ವ, ಚೀವರಕ್ಕೆ ಹೊಲಿಗೆ, ಬಣ್ಣ ಹಾಕುವಿಕೆ, ಪಿಂಡಪಾತ್ರ ತೊಳೆಯುವಿಕೆ, ಹಾಸಿಗೆ ಸಿದ್ಧಪಡಿಸುವಿಕೆ ಇತ್ಯಾದಿಗಳು ಸಣ್ಣಪುಟ್ಟ ಅಡ್ಡಿಗಳಾಗಿವೆ. (ಅವನ್ನೆಲ್ಲಾ ನಿಗಿಧಿತ ಸಮಯ ನೀಡಿ ನಿರ್ವಹಿಸಿ ಮೀರಿ ಹೋಗಬೇಕಾಗುತ್ತದೆ).
ಭಾವನಾ ವಿಧಾನ: ಸಮಾಧಿ ಅಭಿವೃದ್ಧಿಯ ಸೂಚನೆಗಳನ್ನು ಅಲಕ್ಷಿಸದೆ ಸಾಧಿಸಿ. ಈಗ ಕಮ್ಮಟ್ಟನಗಳನ್ನು ವಿವರಿಸುವ ಸಮಯ ಬಂದಿದೆ. ಪಠವಿ ಕಸಿಣಾದಿಂದ ಆರಂಭಿಸೋಣ.

ಪಠವಿ ಕಸಿಣ: 

ಪಠವಿ ಎಂದರೆ ಪೃಥ್ವಿ (ಭೂಮಿ/ಘನ) ಕಸಿಣಾ ಎಂದರೆ ಸಾರ್ವತ್ರಿಕ ಪೂರ್ಣ, ಎಲ್ಲಾ ಎಂದರ್ಥ.
ಪಠವಿ ಕಸಿಣಾವನ್ನು ತಯಾರಿಸುವಿಕೆ:
1. ಗುರುವಿನ ಯಾವ ನಿದರ್ೆಶನಗಳನ್ನು ಅಲಕ್ಷಿಸಬಾರದು.
2. ಕಸಿಣಾ ನಿಮರ್ಿಸುವಾಗ ಅದು ನೀಲಿ, ಕೆಂಪು, ಬಿಳಿ ಅಥವಾ ಹಳದಿ ವರ್ಣದ್ದಾಗಿರದಂತೆ ಎಚ್ಚರವಹಿಸಬೇಕು. ಏಕೆಂದರೆ ಆಗ ಅದು ವರ್ಣಕಸಿಣಾ ಆಗುವ ಸಾಧ್ಯತೆ ಇರುವುದರಿಂದಾಗಿ ಹೀಗೆ ಹೇಳಲಾಗಿದೆ.
3. ಮುಂಜಾನೆಯ ಸೂರ್ಯನ ವರ್ಣದ ಜೇಡಿಮಣ್ಣನ್ನು ತಯಾರಿಸಲು ಬಳಸಿ.
4. ಅದು ತಟ್ಟೆಯು ಆಕಾರದಲ್ಲಿರಲಿ ಹಾಗು ಅದೇ ಅಳತೆಯಲ್ಲಿರಲಿ.
5. ಕಸಿಣಾದ ಮಂಡಲದ ಮುಂದೆ ದರ್ಪಣ ವೀಕ್ಷಿಸುವಂತೆ ನೋಡಿರಿ. ಅತಿ ದೂರವೂ ಕೂಡಬೇಡಿ ಹಾಗೆಯೇ ಅತಿ ಹತ್ತಿರವೂ ಬೇಡ, ಅತಿ ಮೇಲಕ್ಕೂ ಕೂಡಬೇಡಿ, ಪಠವಿ ಮಂಡಲಕ್ಕಿಂತ ಕೆಳಗೂ ಬೇಡ.

1. (ಪ್ರಥ್ವಿ) ಪಠವಿ ಕಸಿನಾ




ಇಲ್ಲಿ ಭಿಕ್ಷುವು ತನ್ನ ಸಾಧನೆಗಾಗಿ ಹಿತಕರವಾದ ಸೌಲಭ್ಯಪೂರಿತ, ನಿರ್ಜನ ನಿಶ್ಶಬ್ದವಾದ ಮತ್ತು ಅಬಾಧಿತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಪದ್ಮಾಸನದಲ್ಲಿ ಅಸೀನನಾಗಿ ಆಸೆಯುತ ಹಾಗು ಅಕುಶಲ ಯೋಚನೆಯನ್ನೆಲ್ಲಾ ವಜರ್ಿಸಿ, ಮನಸ್ಸನ್ನು ಸಂಯಮಗೊಳಿಸುತ್ತಾನೆ. ನಂತರ ಸುಮಾರು 4 ಅಡಿ ದೂರದಲ್ಲಿ ಪಠವಿ ಕಸಿನಾ ಮಂಡಲವನ್ನು ಇಡಬೇಕು, ಅದು 4 ಅಡಿಗಿಂತ ದೂರವು ಇರಬಾರದು, ತೀರ ಹತ್ತಿರವೂ ಇರಬಾರದು, ಅತಿ ಮೇಲಕ್ಕೂ ಇರಬಾರದು, ಅತಿ ಕೆಳಕ್ಕೂ ಇರಬಾರದು. ಅರ್ಧ ತೆರೆದ ಕಣ್ಣಿನಿಂದ ನೋಡಲು ಅನುಕೂಲವಾಗಿರುವಂತೆ ಇಡಬೇಕು. ಕೆಲವರು ಗೋಡೆಗೆ ನೇತುಹಾಕುತ್ತಾರೆ. ಕೆಲವರು ಹಾಗೆ ನೆಲದ ಮೇಲಿಡುತ್ತಾರೆ. (ಪಠವಿ ಕಸಿನಾ ಮಂಡಲ ಎಂದರೆ 1 ಅಡಿ ವ್ಯಾಸದ ವತರ್ೂಲ ತಟ್ಟೆ ಆಕಾರದ ರಟ್ಟನ್ನು ತೆಗೆದುಕೊಂಡು ಅದರ ಸುತ್ತಮುತ್ತಲೂ ಅಂಟು ಮಣ್ಣನ್ನು ಮೆತ್ತುತ್ತಾರೆ. ಅದರ ಬಣ್ಣವು ಉದಯ ಸೂರ್ಯನ ವರ್ಣದಾಗಿರಬೇಕು. ಮಂಡಲದ ಅಂಚನ್ನು ಬೇರೆ ವರ್ಣದ ವಸ್ತುವಿನಿಂದ ಸುತ್ತಬೇಕು. ಏಕೆಂದರೆ ಅಂಚಿನ ಒಳಗಡೆಯ ಮಂಡಲ ಎದ್ದು ಕಾಣುವಂತಿರಬೇಕು). ಈ ರೀತಿಯ ಉದಯ ಸೂರ್ಯನ ವರ್ಣದ ಮಣ್ಣಿನ ಮಂಡಲವನ್ನು ತದೇಕ ದೃಷ್ಟಿಯಿಂದ ಗಮನಿಸಬೇಕು. ಪೂರ್ಣವಾಗಿ ಕಣ್ಣು ತೆರೆಯಬಾರದು. ಪ್ರಾರಂಭದಲ್ಲಿ ಕಣ್ಣು ಮುಚ್ಚಿಯು ಮಾಡಬಾರದು. ಅರ್ಧ ತೆರೆದ ಕಣ್ಣಿನಿಂದ ಹಿತವಾಗಿ ನೋಡಬೆಕು. ಕನ್ನಡಿಯಲ್ಲಿ ಮುಖ ನೋಡುವ ಹಾಗೆ ನೋಡಬೇಕು. ಬೇರೆಕಡೆ ನೋಡಬಾರದು. ಬೇರೆ ಕಡೆಗೆ ಗಮನವು ಹೋಗಬಾರದು. ಏನನ್ನೂ ಯೋಚಿಸಬಾರದು. ಕೇವಲ ಮಂಡಲವನ್ನು ಏಕಾಗ್ರತೆಯಿಂದ ಗಮನಿಸುತ್ತಿರಬೇಕು. ಹಾಗು ಪಠವಿ (ಪ್ರಥ್ವಿ) ಪಠವಿ... ಪಠವಿ ಪಠವಿ, ಅಥವಾ ಮಾಹಿ (ಶ್ರೇಷ್ಠ) ಅಥವಾ ಮೆಹಿನಿ (ಮಿತ್ರ) ಅಥವಾ ಭೂಮಿ (ನೆಲ) ಅಥವಾ ವಸುಧಾ (ಐಶ್ವರ್ಯ ನೀಡುವವಳು) ಅಥವಾ ವಸುಧರಾ ಎಂದು ಜಪಿಸುತ್ತಿರಬೇಕು. ಈ ರೀತಿಯ ಗಮನಿಸುತ್ತಿರುವ ಧ್ಯಾನ ವಿಷಯವು ಪ್ರಾಥಮಿಕ ಚಿಹ್ನೆ (ಪರಿಕಮ್ಮ ನಿಮಿತ್ತ) ಎನ್ನುತ್ತಾರೆ. ಈ ರೀತಿ ಇದೇರೀತಿ ಆತನು ಸುಲಭವಾಗಿ ಕಲ್ಪಿಸುವವರೆಗೆ ಧ್ಯಾನಿಸಬೇಕು, ಜಪಿಸುತ್ತಿರಬೇಕು. ಹೀಗೆಯೆ ಕೆಲವು ದಿನಗಳವರೆಗೆ/ವಾರ/ತಿಂಗಳು/ವರ್ಷ ಆತನು ಮಾಡಿದ ನಂತರ ಆತನಿಗೆ ಸಾವಿರಸಲ/ಜಪಿಸಿದ ಲಕ್ಷ ಸಾರಿ ನಂತರ ಆತನಿಗೆ ಸುಲಭವಾಗಿ ತೆರೆದ ಕಣ್ಣಿನಿಂದ ಅಥವಾ ಮುಚ್ಚಿದ ಕಣ್ಣಿನಿಂದ ಕಲ್ಪಿಸಲು ಸಾಧ್ಯವಾಗುತ್ತದೆ. ಅದನ್ನು ಆಕಾಶದಲ್ಲಿರುವಂತೆ ಕಾಣುತ್ತಾನೆ. ಕೆಲವೊಮ್ಮೆ ಹತ್ತಿರ, ಕೆಲವೊಮ್ಮೆ ದೂರ, ಕೆಲವೊಮ್ಮೆ ಚಿಕ್ಕ, ಕೆಲವೊಮ್ಮೆ ದೊಡ್ಡದಾಗಿ ಕಾಣುತ್ತಾನೆ. ಇದಕ್ಕೆ ವಶೀಕೃತ ಚಿಹ್ನೆ (ಉಗ್ಗಹ ನಿಮಿತ್ತ) ಎನ್ನುತ್ತಾರೆ. ಆತನು ಅದನ್ನು ಕಣ್ಣುಮುಚ್ಚಿಯು ಸಹಾ ಸ್ಪಷ್ಟವಾಗಿ ನೋಡಬಲ್ಲ.
ಈ ರೀತಿಯಾಗಿ ವಶೀಕೃತ ಚಿಹ್ನೆ (ಉಗ್ಗಹ ನಿಮಿತ್ತ) ಸಿದ್ಧಿಯಾದ ಮೇಲೆ ಆತನು ಬೇರೆ ಸ್ಥಳದಲ್ಲಿ ಧ್ಯಾನಿಸಬಹುದು. ಎಲ್ಲಿ ಬೇಕಾದರೂ ಧ್ಯಾನಿಸಬಹುದು. (ಒಂದುವೇಳೆ ಚಿಹ್ನೆ ಮಾಯವಾದರೆ ಮತ್ತೆ ಆತನು ಮೊದಲಿನಂತೆ ಸಿದ್ಧಿಸಬೇಕಾಗುತ್ತದೆ).
ನಂತರ ಆತನು ವಶೀಕೃತ ಚಿಹ್ನೆ (ಉಗ್ಗಹ ನಿಮಿತ್ತ)ವನ್ನೇ ಧ್ಯಾನಿಸಬೇಕಾಗುತ್ತದೆ. ಹೀಗೆ ಧ್ಯಾನ ಮಾಡುತ್ತಿರುವಾಗ ಆತನಲ್ಲಿ ಪಂಚ ನಿವಾರಣೆಗಳು ನಶಿಸುತ್ತವೆ. ಮನಸ್ಸು ಏಕಾಗ್ರವಾಗಿ ಸಾಮಿಪ್ಯ ಸಮಾಧಿ (ಉಪಚರ ಸಮಾಧಿ)ಯಾಗಿ, ಪತಿಭಾಗ ನಿಮಿತ್ತ (ಪ್ರತಿಫಲಿತ ಚಿಹ್ನೆ) ಉಂಟಾಗುತ್ತದೆ. ಆತನು ಇಚ್ಛಿಸಿದಂತೆ ಪ್ರತಿಫಲಿತ ಚಿನ್ಹೆ ಕಾಣುತ್ತದೆ. ಹತ್ತಿರವೆಂದರೆ ಹತ್ತಿರ ಬರುವುದು. ಬಲಕ್ಕೆ ಇಚ್ಛಿಸಿದರೆ ಬಲಭಾಗಕ್ಕೆ ಬರುವುದು. ಈ ಪತಿಭಾಗ ನಿಮಿತ್ತವನ್ನು ತುಂಬ ಕಷ್ಟಪಟ್ಟು ಕೌಶಲ್ಯದಿಂದ, ರಕ್ಷಿಸಬೇಕಾಗುತ್ತದೆ. ಅದನ್ನು ಅಮೂಲ್ಯವಾದ ರತ್ನದಂತೆ ಕಾಪಾಡಿ ಹಗಲು ರಾತ್ರಿ ಧ್ಯಾನಿಸಬೆಕಾಗುತ್ತದೆ. ಮೊದಲಿನ ವಶೀಕೃತ ಚಿಹ್ನೆಗೂ ಹಾಗು ಈಗಿನ ಪ್ರತಿಫಲಿತ ಚಿಹ್ನೆಗೂ ವ್ಯತ್ಯಾಸವಿದೆ. ವಶೀಕೃತ (ಉಗ್ಗಹನಿಮಿತ್ತ) ಚಿಹ್ನೆಯಲ್ಲಿ ಯಾವುದೇ ತಪ್ಪಿದರೆ ಅದು ಸಹಜವಾಗಿ ಕಾಣುತ್ತಿತ್ತು. ಆದರೆ ಪ್ರತಿಪಲಿತ ಚಿಹ್ನೆ (ಪತಿಬಾಗನಿಮಿತ್ತ) ಯಲ್ಲಿ ಉಗ್ಗಹ ನಿಮಿತ್ತವನ್ನು ಸೀಳಿಕೊಂಡು ಬಂದಂತೆ ಸಾವಿರಪಟ್ಟು ಶುದ್ಧವಾಗಿ ಕಂಡುಬರುತ್ತದೆ. ಹೇಗೆಂದರೆ ಚೀಲದಿಂದ ದರ್ಪಣವನ್ನು ತೆಗೆಯುವ ರೀತಿ, ಮೋಡಗಳಿಂದ ಹೊರಬರುವ ಚಂದಿರನ ರೀತಿ ಅಥವಾ ಕಾಮರ್ೊಡಗಳ ಎದುರು ಹಾರುವ ಕೊಕ್ಕರೆಗಳ ರೀತಿ ಕಂಡುಬರುತ್ತದೆ. ಆದರೆ ಈ ಪ್ರತಿಫಲಿತ ನಿಮಿತ್ತಕ್ಕೆ ಬಣ್ಣವಾಗಲಿ ಅಥವಾ ಆಕಾರವಾಗಲಿ ಇರುವುದಿಲ್ಲ. ಇದು ಸನ್ಯಾದಿಂದ (ಗ್ರಹಿಕೆಯಿಂದ) ಮಾತ್ರ ಉದಯಿಸುತ್ತದೆ. ಇದು ಉಂಟಾದ ಕ್ಷಣವೇ ನಿವರಣಗಳು ಸ್ತಬ್ದವಾಗಿ ಅಂತ್ಯವಾಗುತ್ತದೆ ಮತ್ತು ಮನಸ್ಸು ಏಕಾಗ್ರಗೊಂಡು ಸಾಮಿಪ್ಯ (ಉಪಚರ) ಸಮಾಧಿಗೆ ಹೋಗುತ್ತದೆ.
ಸಾಧಕನಲ್ಲಿ ಪಂಚ ನಿವರಣಗಳು ಅಂತ್ಯಗೊಂಡು ಸಾಮಿಪ್ಯ (ಉಪಚರ) ಸಮಾಧಿ ಪಡೆದಿರುತ್ತಾರೆ. ಆದರೆ ಆತನಲ್ಲಿ ಇನ್ನೂ ಧ್ಯಾನಾಂಗಗಳಾದ ವಿತಕ್ಕ, ವಿಚಾರ, ಪ್ರೀತಿ, ಸುಖ, ಏಕಾಗ್ರತೆ - ಇವು ಇನ್ನೂ ಬಲಿಷ್ಠವಾಗಿರುವುದಿಲ್ಲ. ಇವನ್ನು ವೃದ್ಧಿಸಿದಾಗ ಆತನು ಸ್ಥಿರ ಸಮಾಧಿ ಪಡೆಯುತ್ತಾನೆ.
ಈ ಸ್ಥಿತಿಯಲ್ಲಿ ಆತನ ಮನಸ್ಸು ಅತ್ಯಂತ ಮೃದು, ಅತಿ ಶಾಂತವಾಗಿರುತ್ತದೆ. ಅತ್ಯಂತ ಏಕಾಗ್ರತೆಯಲ್ಲಿ ತಲ್ಲೀನನಾಗುತ್ತಾನೆ. ಆತನು ತನ್ನ ಶರೀರ ಮರೆಯುತ್ತಾನೆ. ಆತನಿಗೆ ತನ್ನ ಶರೀರದ ಅನುಭೂತಿಯೆ ಆಗುವುದಿಲ್ಲ. ಹಾಗು ಆತನಿಗೆ ಯಾವ ಶಬ್ದವು ಕೇಳಿಸುವುದಿಲ್ಲ.
ಅಪ್ಪಣ ಸಮಾಧಿಯು (ಸ್ಥಿರ ಸಮಾಧಿ) ಇದಕ್ಕಿಂತ ಸೂಕ್ಷ್ಮವಾಗಿರುತ್ತದೆ. ಮನಸ್ಸೇ ಪಠವಿಯಾಗಿರುತ್ತದೆ. ಹಾಗು ಪಠವಿಯೇ ಮನಸ್ಸಾಗಿರುತ್ತದೆ. ಅಷ್ಟು ಆಳವಾದ ಏಕಾಗ್ರ ಅನುಭವವಾಗುತ್ತದೆ. ಮನಸ್ಸು ಅತ್ಯಂತ ಸ್ತಬ್ದವಾಗುತ್ತದೆ. ಅತ್ಯಂತ ಸ್ವಚ್ಛವಾಗುತ್ತದೆ. ಅತ್ಯಂತ ಪ್ರಕಾಶಮಾನವಾಗಿರುತ್ತದೆ. ಪ್ರತಿಭಾಗ (ಪ್ರತಿಫಲಿತ) ನಿಮಿತ್ತವು ಶುದ್ಧಗೊಳ್ಳುತ್ತದೆ. ಹಾಗೆಯೇ ಮನಸ್ಸು ಸೂಕ್ಷ್ಮವಾಗಿ, ಹಗುರವಾಗುತ್ತ ಹೋಗುತ್ತದೆ. ಈ ಉಪಚರ (ಸಾಮಿಪ್ಯ) ಸಮಾಧಿಯು ಗಂಟೆಗಳವರೆವಿಗೂ ನಡೆಯುತ್ತದೆ. ನೀವು ಅಷ್ಟು ಕಾಲ ಕುಳಿತಿರಬೇಕಾಗುತ್ತದೆ. ಕೆಲವೊಮ್ಮೆಯಂತು ದಿನಗಳು ಕುಳಿತಿರಬೇಕಾಗುತ್ತದೆ. ಅತ್ಯಂತ ಆನಂದಮಯ ಹಾಗು ಸುಖಮಯ ಅನುಭವಗಳು ಉಂಟಾಗುತ್ತದೆ. ಆನಂದದಿಂದ ನಮ್ಮ ದೇಹ ಅತ್ಯಂತ ಹಗುರತನದ ಅನುಭೂತಿ ಆಗುತ್ತದೆ. ಅನೇಕ ವಿಧವಾದ ದರ್ಶನಗಳು ಉಂಟಾಗುತ್ತದೆ. ದಾರಿ ತಪ್ಪಿಸುವಂತಹ ದರ್ಶನಾನುಭವಗಳು ಉಂಟಾಗುತ್ತದೆ. ನಂತರ ನೀವು ಆಳವಾದ ಸಮಾಧಿಯ ಅಭಾದಿತ, ಅಭಂಗ ಸಮಾದಿಯ ಅನುಭೂತಿ ಪಡೆಯುವಿರಿ. ಆಗ ನೀವು ಧ್ಯಾನ ನಿಮಿತ್ತದಲ್ಲಿ ಆಳವಾಗಿ ಮುಳುಗುವಿರಿ. ನಂತರ ನಿಮಗೆ ನೀವು ಇಂದ್ರಿಯಭೋಗದ ಕ್ಷೇತ್ರದಿಂದ ಪೂರ್ಣವಾಗಿ ಮುಕ್ತರಾಗುವಿರಿ ಎಂಬ ಅನುಭವ ಉಂಟಾಗುತ್ತದೆ.
ನೀವು ಐದು ಧ್ಯಾನಗಳಿಂದ ಕೂಡಿದ ಕ್ಷಣವೇ ಪ್ರಥಮ ಸಮಾಧಿ ಪಡೆದಿದ್ದೀರಿ ಎಂದು ಎಂದೂ ಯೋಚಿಸಬೇಡಿ. ನೀವು ಧ್ಯಾನಂಗಗಳ ಬಗ್ಗೆ ಕೆಲವು ಹಂತದ ಜ್ಞಾನ ನಿಮಗೆ ಇದ್ದಾಗ ನೀವು ತಪ್ಪಾಗಿ ಯೋಚಿಸಲಾರಿರಿ. ನಾವು ಪಡೆದಿರುವುದು ಸಾಮಿಪ್ಯ ಸಮಾಧಿಯಾದರೂ ಅದು ಸ್ಥಿರ ಸಮಾಧಿ ಎಂದು ಮಿಥ್ಯಾದೃಷ್ಟಿ ಉಂಟಾಗುತ್ತದೆ. ಅದು ಸರಿಯಲ್ಲ. ಈ ಹಂತಕ್ಕೆ ಹೀಗಾದರೆ ಎಲ್ಲಕ್ಕಿಂತ ಪರಮಸೂಕ್ಷ್ಮವಾದ ನಿಬ್ಭಾನವನ್ನು ನೀವು ಹೇಗೆ ಅರಿಯಬಲ್ಲಿರಿ.
ಸಾಮೀಪ್ಯ ಸಮಾಧಿಯು ಅಲೆಗಳಿರುವ ಸಾಗರದಲ್ಲಿ ಚಲಿಸುವ ಹಡಗಿನಂತೆ ಆದರೆ ಸ್ಥಿರ ಸಮಾಧಿಯು ಅಲೆಗಳಿಲ್ಲದ ಸಾಗರದಲ್ಲಿ ಚಲಿಸುವ ಹಡಗಿನಂತೆ. ಸಾಮೀಪ್ಯ ಸಮಾಧಿಯಲ್ಲಿ ಧ್ಯಾನಂಗಗಳು ಅಷ್ಟು ಬಲಿಷ್ಠವಾಗಿರುವುದಿಲ್ಲ. ಆದರೆ ಸ್ಥಿರ ಸಮಾಧಿಯಲ್ಲಿ ಧ್ಯಾನಂಗಗಳು ಬಲಿಷ್ಠವಾಗಿರುತ್ತದೆ. ಹೇಗೆಂದರೆ ಸಾಮೀಪ್ಯ ಸಮಾಧಿಯು ಮಗುವಿನಂತೆ ನಡೆಯುವ ಮುನ್ನ ಬಹಳಷ್ಟು ಸಾರಿ ಬೀಳುತ್ತದೆ. ಆದರೆ ದೊಡ್ಡದಾದ ಮೇಲೆ ಬೀಳದೆ ಸಮಂಜಸವಾಗಿ ನಡೆಯುವುದು.
ಈ ಪ್ರತಿಭಾಗ ನಿಮಿತ್ತವನ್ನು (ಪ್ರತಿಫಲಿತ ಚಿಹ್ನೆ) ನೀವು ಅತ್ಯಂತ ರಕ್ಷಿಬೇಕಾಗುತ್ತದೆ ಹಾಗು ವಿಕಸಿಸಬೇಕಾಗುತ್ತದೆ. ಮೊದಲು ಅಂಗೈ ಅಗಲವಿದ್ದ ಚಿಹ್ನೆಯನ್ನು ಚಕ್ರದಷ್ಟು ದೊಡ್ಡದಾಗಿ ವೃದ್ಧಿಸಿ, ನಂತರ ಹಳ್ಳಿಯಷ್ಟು, ನಂತರ ನಗರದಷ್ಟು ಹಾಗೆಯೇ ಇಡೀ ಪೃಥ್ವಿಯಷ್ಟು ವಿಕಸಿಸಿ ಧ್ಯಾನಿಸಬೇಕಾಗುತ್ತದೆ. ಏಕೆಂದರೆ ಇದರಿಂದ ಚಿತ್ತವು ಅಭಿವೃದ್ಧಿಯಾಗುತ್ತದೆ.
ನಂತರ ಸಾಧಕನು ಹಿಂದೆ ವಿವರಿಸುವ 10 ವಿಧದ ಧ್ಯಾನದ ಕೌಶಲ್ಯಗಳನ್ನು ಪ್ರಾವಿಣ್ಯತೆಯನ್ನು ಸಾಧಿಸಬೇಕಾಗುತ್ತದೆ. ಅವೆಂದರೆ:
 1. ಸ್ವಚ್ಛತೆ
2. ಧ್ಯಾನಂಗ ಸಮತೋಲನ
3. ಚಿಹ್ನೆಗಳಲ್ಲಿ ಕುಶಲತೆ
4. ಪ್ರಯತ್ನಶೀಲ
 5. ಸಂಯಮ
 6. ಸ್ಫೂತರ್ಿ
7. ಸಮಚಿತ್ತತೆ
 8. ಸಮಾಧಿ ಇಲ್ಲದವರ ವರ್ಜನೆ
 9. ಸಮಾಧಿ ಹೊಂದಿರುವವರ ಸ್ನೇಹ
 10. ಸ್ಥಿರನಿಧರ್ಾರ.
ನಂತರ ಧ್ಯಾನಂಗಗಳ ವಿಕಸತೆಯಿಂದ, ಅಪಾರ ಚಿತ್ತ ಏಕಾಗ್ರತೆಯಿಂದ ಹಾಗು ಕೌಶಲತೆಯಿಂದ ಮನವು ಸ್ಥಿರವಾಗಿದ್ದು, ಮನಸ್ಸು ಇಂದ್ರೀಯ ಕ್ಷೇತ್ರದಿಂದ ರೂಪವಾಚರ ಕ್ಷೇತ್ರಕ್ಕೆ ಬದಲಾಯಿಸುತ್ತದೆ.
ಈ ಪ್ರಥಮ ಸಮಾಧಿ ಸಮಯದಲ್ಲಿ ಇಂದ್ರೀಯ ಭೋಗಗಳಿಂದ, ಅಕುಶಲ ಯೋಚನೆಗಳಿಂದ ಮನಸ್ಸು ಮುಕ್ತವಾಗಿ, ಪಂಚನಿವರಣಗಳು ನಿವಾರಣೆಯಾಗಿ 5 ಧ್ಯಾನದ ಅಂಗಗಳಿಂದ ಬಲಿಷ್ಠವಾಗಿ ಕೂಡಿ ಪ್ರಥಮ ಸಮಾಧಿ ಸ್ಥಾಪಿತವಾಗುತ್ತದೆ.
ಹೀಗೆ ಚಿತ್ತವು ವಿಶುದ್ಧಿಯನ್ನು ಪಡೆಯುತ್ತದೆ. ಆಗ ಬಾಹ್ಯದ ಸದ್ದು ಸ್ವಲ್ಪವೂ ಕೇಳಿಸದು. ದೇಹದಲ್ಲಿ ಏನಾದರೂ ಸರಿದಾಡಿದರೂ, ಏನಾದರೂ ಕಚ್ಚಿದರೂ ಅವರ ಅರಿವು ಬಾರದು. ದೇಹದ ಅರಿವು ಇಲ್ಲದೆ ಹೋಗುತ್ತದೆ. ಇನ್ನೊಂದು ವಿಧವಾಗಿ ಹೇಳಬೇಕೆಂದರೆ ಸಾಧಕನಲ್ಲಿ ಪಂಚ ನಿವರಣಗಳು ನಾಶವಾಗುತ್ತಿದ್ದಂತೆಯೇ ಆನಂದವುಂಟಾಗುತ್ತದೆ. ಈ ಆನಂದವು ಮನವನ್ನಷ್ಟೇ ಅಲ್ಲದೆ ದೇಹವನ್ನು ಆವರಿಸುತ್ತದೆ. ಆಗ ದೇಹವು ಶಾಂತವಾಗುತ್ತದೆ. ಆಗ ಸುಖವು ಉದಯಿಸಿ ಪ್ರಸರಿಸುತ್ತದೆ. ಆಗ ಮನವು ಸ್ಥಿರವಾಗಿ ಏಕಾಗ್ರವಾಗುತ್ತದೆ. ಆಗ ಅಡೆತಡೆಗಳು ಪೂರ್ಣವಾಗಿ ಇಲ್ಲವಾಗಿ ಮನಸ್ಸು ಸಾಧಾರಣ ಚಿತ್ತದಿಂದ (ಇಂದ್ರೀಯ ಕ್ಷೇತ್ರ) ಸಮಾಧಿಯ ಲೋಕದ ಚಿತ್ತವಾಗಿ ಗೋತ್ರ ಪರಿವರ್ತನೆಯಾಗುತ್ತದೆ. ಹಾಗು ಪ್ರಥಮ ಝಾನವನ್ನು ಪಠವಿಯ ಮೇಲೆ ಸ್ಥಾಪಿತವಾಗುತ್ತದೆ. ಝಾನದ ಪದಶಃ ಅರ್ಥ ಧ್ಯಾನ ವಿಷಯವನ್ನು ಪ್ರಕಾಶವುಂಟುಮಾಡುವಿಕೆ ಮತ್ತು ವಿರೋಧವನ್ನು ಸುಟ್ಟುಹಾಕುವಿಕೆ ಎಂದರ್ಥ. ಪ್ರಥಮಬಾರಿ ಸಮಾಧಿ ಲೋಕದ ಚಿತ್ತವಾಗಿ ಪರಿವರ್ತನೆ ಆಗಿರುವುದರಿಂದ ಇದಕ್ಕೆ ಪ್ರಥಮ ಝಾನ ಎನ್ನುತ್ತಾರೆ. ನಂತರ ಸಾಧಕನು 5 ಹಂತದ ಸಮಾಧಿ ಪ್ರಾವಿಣ್ಯತೆ ಪಡೆಯಬೇಕಾಗುತ್ತದೆ.
 ಅವೆಂದರೆ:
1. ಸಮಾಧಿಯಲ್ಲಿ ಪ್ರವೇಶಿಸುವಿಕೆ
        2. ಸಮಾಧಿ ಪ್ರಾಪ್ತಿ
        3. ಸಮಾಧಿಯಲ್ಲಿ ದೀರ್ಘಕಾಲ ಇರುವಿಕೆ
        4. ಸಮಾಧಿಯಿಂದ ನಿರ್ಗಮನ
        5. ಸಮಾಧಿಯ ಪುನರ್ ಅವಲೋಕನ.
ಈ ರೀತಿಯಲ್ಲಿ ಸಾಧಕನು ನಿರಂತರ ಪ್ರಾವಿಣ್ಯತೆ ಪಡೆದ ಮೇಲೆ ಅವನು ಇಚ್ಛಿಸಿದ ಸ್ಥಳದಲ್ಲಿ, ಇಚ್ಛಿಸಿದಷ್ಟು ಕಾಲ ಕ್ಷಿಪ್ರವಾಗಿ ಸಮಾಧಿ ಸಿದ್ಧಿಸಬಲ್ಲ ಹಾಗೆಯೇ ದೀರ್ಘವಾಗಿ ಉಳಿಯಬಲ್ಲ ಹಾಗೆಯೇ ಕ್ಷಿಪ್ರವಾಗಿ ಹೊರಬರಬಲ್ಲ. ಹಾಗೆಯೇ ಆತನು ಪುನರ್ ಅವಲೋಕಿಸಿದಾಗ ಆತನಿಗೆ ವಿತಕ್ಕ, ವಿಚಾರಗಳು ಸ್ಥೂಲವಾಗಿ ಕಂಡುಬರುತ್ತದೆ. ಹಾಗು ಪೀತಿ, ಸುಖ, ಏಕಾಗ್ರತೆಗಳು ಶಾಂತವಾಗಿ ಕಾಣುತ್ತವೆ. ಆಗ ಅವನು ಮತ್ತೇ ಸೀಮಿತವನ್ನು ಮನಸ್ಸಿಗೆ ತಂದುಕೊಂಡು ಸ್ಥೂಲವಾದ ವಿತಕ್ಕ, ವಿಚಾರವನ್ನು ತೊಡೆದುಹಾಕುತ್ತಾನೆ. ಹಾಗು ಶಾಂತವಾಗಿರುವ ಪೀತಿ, ಸುಖ, ಏಕಾಗ್ರತೆಯನ್ನು ಪಡೆಯುತ್ತಾನೆ. ಹಾಗೆಯೇ ದ್ವಿತೀಯ ಧ್ಯಾನವನ್ನು ಪಡೆಯುತ್ತಾನೆ.
ದ್ವಿತೀಯ ಸಮಾಧಿ : ಈ ರೀತಿಯಾಗಿ ಸಾಧಕನು ವಿತಕ್ಕ, ವಿಚಾರಗಳನ್ನು ಬೇರ್ಪಡಿಸಿ, ಆಂತರಿಕದ ಪ್ರಬಲ ಶ್ರದ್ಧೆಯಿಂದ ಏಕೋಭಾವವನ್ನು ಪಡೆದು, ವೃದ್ಧಿಸಿ, ಪ್ರೀತಿ, ಸುಖದಿಂದ ಕೂಡಿದ ದ್ವಿತೀಯ ಸಮಾಧಿ ಪಡೆಯುತ್ತಾನೆ.
ನಂತರ ಸಮಾಧಿಯ 5 ಹಂತದ ಪ್ರಾವಿಣ್ಯತೆ ಪಡೆದು ಸಮಾಧಿಯನ್ನು ಅವಲೋಕಿಸಿದಾಗ ಆತನಿಗೆ ಪೀತಿಯು ಸ್ಥೂಲವಾಗಿ ಕಂಡುಬರುತ್ತದೆ. ಹಾಗು ಸುಖ ಮತ್ತು ಏಕಾಗ್ರತೆಯು ಶಾಂತವಾಗಿ ಸೂಕ್ಷ್ಮವಾಗಿ ಕಂಡುಬರುತ್ತದೆ.
ತೃತೀಯ ಸಮಾಧಿ : ಆಗ ಸಾಧಕನು ಪೀತಿ (ಆನಂದವನ್ನು)ಯನ್ನು ಬೇರ್ಪಡಿಸಿ ದೂರಿಕರಿಸುತ್ತಾನೆ. ಆತನು ಸಮಚಿತ್ತತೆಯಿಂದ ವಿಹರಿಸುತ್ತಾನೆ ಮತ್ತು ಪೂರ್ಣವಾಗಿ ಎಚ್ಚರಿಕೆಯಿಂದ ಹಾಗು ಅರಿವಿನಿಂದ ಕೂಡಿರುತ್ತಾನೆ. ಆಗ ಆತನ ಶರೀರವು ಸುಖ (ದಿವ್ಯವಾದ ಶಾಂತತೆ)ದಿಂದ ಕೂಡಿದ್ದು ಆತನು ತೃತೀಯ ಧ್ಯಾನದಲ್ಲಿ ಪ್ರವೇಶಿಸಿ ನೆಲೆಸುತ್ತಾನೆ. ಅಂತಹ ಸ್ಥಿತಿಗೆ ಆರ್ಯರು ಈ ರೀತಿ ಹೇಳುತ್ತಾರೆ ಸಮಚಿತ್ತತೆ ಮತ್ತು ಜಾಗರೂಕತೆ ಹೊಂದಿದ ಸುಖದಲ್ಲಿ ಈತ ವಿಹರಿಸುತ್ತಿದ್ದಾನೆ.
ಈ ಸಮಾಧಿಯು ವಿರಾಗದಿಂದ ಸ್ಥಾಪಿತವಾಗಿದೆ ಹಾಗು ಇದರ ತತ್ಕ್ಷಣದ ಕಾರ್ಯ ಪೀತಿಯ ಮರೆಯಾಗುವಿಕೆಯಾಗಿದೆ. ನಂತರ ಸಮಾಧಿಯಲ್ಲಿ ಪ್ರಾವಿಣ್ಯತೆ ಪಡೆದು ಆತನು ತೃತೀಯ ಸಮಾಧಿ ಅವಲೋಕಿಸಿದಾಗ, ಆತನಿಗೆ ಸುಖವು (ದಿವ್ಯಶಾಂತಸ್ಥಿತಿ) ಸ್ಥೂಲವಾಗಿ ಕಂಡುಬರುತ್ತದೆ. ಹಾಗು ಸಮಚಿತ್ತತೆ ಮತ್ತು ಏಕಾಗ್ರತೆಯು ಶಾಂತವಾಗಿ ಸೂಕ್ಷ್ಮವಾಗಿ ಕಂಡುಬರುತ್ತದೆ.
ಚತುರ್ಥ ಸಮಾಧಿ : ಇಲ್ಲಿ ಭಿಕ್ಷುವು ಸುಖವನ್ನು ಹಾಗು ನೋವನ್ನು ಬೇರ್ಪಡಿಸಿ, ದೂರಿಕರಿಸಿ. ಸುಖ ಮತ್ತು ಶೋಕಗಳಿಂದ ಮುಕ್ತವಾದ ಚತುರ್ಥ ಸಮಾಧಿಯಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ. ಆ ಮಹಾಸ್ಥಿತಿಯು ನೋವು ಮತ್ತು ನಲಿವು ರಹಿತವಾದ ಜಾಗರೂಕತೆಯುತ ಸಮಚಿತ್ತತೆ ಮತ್ತು ಏಕಾಗ್ರತೆಯಿಂದ ಕೂಡಿದ ಚತುರ್ಥ ಸಮಾಧಿ ಪ್ರಾಪ್ತಿಮಾಡುತ್ತಾನೆ.
ಆ ಸ್ಥಿತಿಯಲ್ಲಿ ಎಚ್ಚರಿಕೆಯು ಪರಿಶುದ್ಧವಾಗುತ್ತದೆ. ಸ್ಪಷ್ಟವಾಗುತ್ತದೆ. ಆದ್ದರಿಂದ ಈ ಸ್ಥಿತಿಗೆ ಸಮಚಿತ್ತತೆಯಿಂದ ಶುದ್ಧಗೊಂಡ ಜಾಗ್ರತೆ ಎನ್ನುವರು. ಇಲ್ಲಿ ಸಮಚಿತ್ತತೆಯನ್ನು ಸಂವೇದನೆಯಾಗಿಯು ಹಾಗು ಸಮಾಧಿಯಾಗಿಯು ಪರಿಗಣಿಸಬೇಕು. ಇಲ್ಲಿ ಕೇವಲ ಎರಡು ಅಂಶಗಳಿವೆ, ಸಮಚಿತ್ತತೆ ಮತ್ತು ಏಕಾಗ್ರತೆ. ಈ ರೀತಿಯಾಗಿ ಆತನು ಪಠವಿ ಕಸಿಣಾದ ಮೂಲಕ ಚತುರ್ಥ ಸಮಾಧಿ ಪ್ರಾಪ್ತಿಮಾಡುತ್ತಾನೆ.
ಏಳು ವಿಧದಲ್ಲಿ ಚಿಹ್ನೆಯನ್ನು ರಕ್ಷಿಸುವಿಕೆ:
1. ವಾಸಸ್ಥಳ: ಆತನ ವಾಸಸ್ಥಳವು ಯೋಗ್ಯವಾಗಿ ಹೊಂದುವಂತಹದ್ದಾಗಿದ್ದರೆ ಉಂಟಾಗದಿದ್ದ ಕುಶಲ ಸ್ಥಿತಿಗಳು ಉದಯಿಸುತ್ತವೆ, ಉದಯಿಸಿದ ಕುಶಲ ಸ್ಥಿತಿಗಳು ವೃದ್ಧಿಯಾಗುವುವು. ಅಂದರೆ ಸ್ಥಾಪನೆಯಾಗದಿದ್ದ ಜಾಗರೂಕತೆಯು ಸ್ಥಾಪಿತವಾಗಿ. ಸ್ಥಾಪನೆಯಾಗದಿದ್ದ ಸಮಾಧಿಯು ಸ್ಥಾಪಿತವಾಗಿ ಸ್ಥಿರಗೊಳ್ಳುತ್ತದೆ. ಕೆಲವರಿಗೆ ಸ್ಥಳವೂ ಹೊಂದಾಣಿಕೆಯಾಗದೆ ಯಾವ ಫಲ ಸಿಕ್ಕಿರುವುದಿಲ್ಲ. ಆದರೆ ಸ್ಥಳವೂ ಹೊಂದಾಣಿಕೆಯಾದ ನಂತರ ಬಹುಬೇಗ ಕ್ಷಿಪ್ರವಾಗಿ ಗುರಿ ತಲುಪುವಂತಾಗುತ್ತದೆ.
2. ಆಹಾರ ದೊರಕುವಿಕೆ: ಕಾಲಕಾಲಕ್ಕೆ ಆಹಾರ ದೊರೆತಾಗ ಯಾವ ಕ್ಷೊಭೆಯೂ ಕಾರಣವಾಗದೆ ಸುಲಭವಾಗಿ ಚಿಹ್ನೆ ರಕ್ಷಿಸುವವನಾಗುತ್ತಾನೆ.
3. ಮಾತನಾಡುವಿಕೆ: ಇಲ್ಲಿ 32 ಬಗೆಯ ಗಮ್ಯರಹಿತ ಮಾತು ಆಡಬಾರದು, 10 ಬಗೆಯ ಯೋಗ್ಯರೀತಿಯ ಅಂಶಗಳಿಂದಾಗಿ ಮಾತು ಇರಬೇಕು.
4. ಸಮಾಧಿರಹಿತರ ವರ್ಜನೆ ಹಾಗು ಸಮಾಧಿಸ್ಥರ ಸ್ನೇಹ
5. ಪ್ರಿಯವಾದ ಆಹಾರ 
6. ಪ್ರಿಯವಾದ ವಾತಾವರಣ
7. ಯೋಗ್ಯವಾದ ಭಂಗಿ: ನಾವು ಕುಳಿತುಕೊಳ್ಳುವ ಭಂಗಿಯು ನೋವು (ಕ್ಷೊಭೆ) ತರಬಾರದು, ಶಾಂತತೆ ತರಬೇಕು, ಚಾಂಚಲ್ಯತೆ ತರಬಾರದು, ಏಕಾಗ್ರತೆ ಸಾಧಿಸುವಂತಾಗಬೇಕು.

10 ವಿಧದ ಸಮಾಧಿ ಕೌಶಲ್ಯಗಳು:

ಸಮಾಧಿಯನ್ನು ಅಭ್ಯಾಸಿಸುವಾಗ 10 ವಿಧದ ಕೌಶಲ್ಯಗಳಲ್ಲಿ ನುರಿತನಾಗಬೇಕಾಗುತ್ತದೆ. ಆಗಮಾತ್ರ ಸಮಾಧಿ ಸಿದ್ಧಿಸಲು ಸಾಧ್ಯವಾಗುತ್ತದೆ. ಅವುಗಳ ವಿವರಣೆ ಹೀಗಿದೆ:

1. ಶುದ್ಧತೆ (ಸ್ವಚ್ಛತೆ)

ಅಂದರೆ ಇಲ್ಲಿ ಆತನು ಬಾಹ್ಯ ಶುಭ್ರತೆ ಹಾಗು ಆಂತರಿಕ ಶುಭ್ರತೆ ಎರಡನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಾಹ್ಯ ಶುಭ್ರತೆ ಎಂದರೆ ವಸ್ತ್ರಗಳು, ಚರ್ಮ (ದೇಹ). ಆಂತರಿಕ ಶುಭ್ರತೆ ಎಂದರೆ ಶರೀರದ ಒಳ ಆರೋಗ್ಯ ಅಥವಾ ಮನಸ್ಸಿನ ಉತ್ತಮ ಆಲೋಚನೆಗಳು. ಹೀಗೆ ಯಾವಾಗ ಬಾಹ್ಯ ಮತ್ತು ಆಂತರಿಕ ಆಧಾರಗಳು ಶುಭ್ರವಾಗಿರುವವೋ ಆಗ ವಿಞ್ಞಾನದಲ್ಲಿ ಮತ್ತು ವಿಞ್ಞಾನದ ಸಹಗಾಮಿ ಎಲ್ಲವೂ ಸ್ವಚ್ಛವಾಗಿ ಶುದ್ಧವಾಗಿ ಉದಯಿಸುತ್ತವೆ.

2. ಪಂಚೇಂದ್ರಿಯಗಳ (ಅದಿಪತ್ಯ) ಸಮತೋಲನ: 

ಹೇಗೆ ಶರೀರಕ್ಕೆ ಐದು ಇಂದ್ರಿಯಗಳಿವೆಯೋ ಹಾಗೇ ಧ್ಯಾನ ಮನಸ್ಸಿಗೂ ಐದು ಇಂದ್ರಿಯಗಳಿವೆ (ಅದಿಪತ್ಯ). ಅವೆಂದರೆ: ಶ್ರದ್ಧಾ, ವಿರಿಯಾ, ಸ್ಮೃತಿ, ಸಮಾಧಿ ಮತ್ತು ಪಞ್ಞಾ. ಇವುಗಳ ಸಮತೋಲನ ಅತ್ಯಗತ್ಯ. ಇಲ್ಲದಿದ್ದರೆ ಜೀವನದಲ್ಲಿ ಏರುಪೇರುಗಳಾಗುವ ಸಾಧ್ಯತೆಯಿರುತ್ತದೆ. ಧ್ಯಾನದಲ್ಲಿ ಇವುಗಳ ಸಮತೋಲನ ಮಹತ್ತರವಾದ ಫಲ ನೀಡುತ್ತದೆ.
ಶ್ರದ್ಧೆಯು ಪ್ರಬಲವಾಗಿದ್ದು, ಉಳಿದವು ದುರ್ಬಲವಾಗಿದ್ದರೆ ವಿರಿಯ (ಪ್ರಯತ್ನ) ಕಾರ್ಯಶೀಲವಾಗದು, ಸ್ಮೃತಿಯು ಜಾಗರೂಕವಾಗದು, ಏಕಾಗ್ರತೆಯು ಚದುರಿ ಹೋಗುವುದು ಹಾಗು ಅರಿಯುವಿಕೆಯು ಮಸುಕಾಗುವುದು. ಹೀಗೆಯೇ ಉಳಿದವುಗಳು ಆಗುತ್ತವೆ.
ವಿವರವಾಗಿ ಈಗ ಶ್ರದ್ಧೆ ಹಾಗು ಪಞ್ಞಾವನ್ನು (ಅರಿವಿಕೆ) ತೆಗೆದುಕೊಳ್ಳೋಣ. ಒಬ್ಬನು ಶ್ರದ್ಧೆ (ನಂಬಿಕೆ)ಯಲ್ಲಿ ಬಲಿಷ್ಠನಾಗಿ, ಅರಿಯುವಿಕೆಯಲ್ಲಿ (ಪಞ್ಞಾ) ದುರ್ಬಲವಾಗಿದ್ದಾಗ ಆತನ ಶ್ರದ್ಧೆಯು ಟೀಕಾತೀತವಾದುದು. ಆದರೆ ಆಧಾವವಿಲ್ಲದ್ದು (ಅಂತಹವನಲ್ಲಿ ಅಂಧಶ್ರದ್ಧೆ, ಮೌಢ್ಯವು ಹೆಚ್ಚಾಗುವ ಸಾಧ್ಯತೆ ಇರುವುದು).
ಹಾಗೆಯೇ ಒಬ್ಬನು ಅರಿಯುವಿಕೆಯಲ್ಲಿ (ಪಞ್ಞಾ) ಬಲಿಷ್ಠನಾಗಿದ್ದು, ಶ್ರದ್ಧೆಯಲ್ಲಿ ದುರ್ಬಲವಾಗಿದ್ದಾಗ ಆತನು ಹಠಮಾರಿತನವುಳ್ಳನಾಗುತ್ತಾನೆ. (ಸ್ವಾವಲಂಬನೆ ಮಾಡಿಕೊಳ್ಳುತ್ತಾನೆ) ಮತ್ತು ಅಂತಹವನನ್ನು ಚಿಕಿತ್ಸೆಯಿಂದ ಗುಣಪಡಿಸಲಾಗದ ರೋಗಿ ಎಂದು ಪರಿಗಣಿಸುತ್ತಾರೆ. ಯಾರಲ್ಲಿ ಶ್ರದ್ಧೆ ಹಾಗು ಪಞ್ಞಾ ಸಮತೋಲನವಾಗಿರುತ್ತವೆಯೋ ಆಗ ಅಂತಹವನು ಶ್ರದ್ಧೆಯುಳ್ಳವನಾಗಿದ್ದು, ಆದರೆ ಹಿಂದೆ ಆಧಾರಯುತ ಅರಿಯುವಿಕೆಯಿರುತ್ತದೆ, ಅಂತಹವನು ಚೆನ್ನಾಗಿ ಸತ್ಯ ಅರಿಯುತ್ತಾನೆ.
ಹಾಗೆಯೇ ಒಬ್ಬನಲ್ಲಿ ಪ್ರಯತ್ನಶೀಲತೆ (ವೀರಿಯಾ) ಅಲ್ಪ (ದುರ್ಬಲ)ವಾಗಿದ್ದು, ಏಕಾಗ್ರತೆ ಬಲಿಷ್ಠವಾಗಿದ್ದಾಗ ಅವನ ಮನಸ್ಸು ನಿದ್ರೆಗೆ ಹಾಗು ಸೋಮಾರಿತನಕ್ಕೆ ಜಾರುತ್ತದೆ. ಹಾಗಿಲ್ಲದೆ ಒಬ್ಬನಲ್ಲಿ ಪ್ರಯತ್ನಶೀಲತೆ ಅಧಿಕವಾಗಿದ್ದು (ಬಲಿಷ್ಠವಾಗಿದ್ದು), ಏಕಾಗ್ರತೆ ದುಬರ್ಲಲವಾಗಿದ್ದಾಗ ಆತನಲ್ಲಿ ಉದ್ವೇಗ (ಕ್ಷೊಭೆ) ಉಂಟಾಗುತ್ತದೆ. ಅದೇ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಇವೆರಡರ (ಪ್ರಯತ್ನ ಮತ್ತು ಏಕಾಗ್ರತೆ) ಸಮತೋಲನ ಅತ್ಯವಶ್ಯಕವಾಗಿದೆ. ಆಗ ಇತ್ತ ಸೋಮಾರಿತನವಕ್ಕೂ ಅವಕಾಶವಿಲ್ಲದೆ ಹಾಗೆಯೇ ಉದ್ವೇಗಗಳಿಗೂ ಅವಕಾಶವಿಲ್ಲದೆ ಏಕಾಗ್ರತೆ ಹಾಗು ಪ್ರಯತ್ನವು ಬಲಿಷ್ಠವಾಗುತ್ತದೆ.
ಮತ್ತೆ ಶ್ರದ್ಧೆ ಹಾಗು ಸಮಾಧಿಯು ಸಹಾ ಸಮತೋಲನವಾಗಿರಬೇಕು. ಏಕೆಂದರೆ, ಸಮಾದಿ ವಿಕಾಸಕ್ಕೆ ಶ್ರದ್ಧೆಯು ಅತ್ಯವಶ್ಯಕವಾಗಿದೆ. ಹಾಗೆಯೇ ಸಮಾಧಿ ಮತ್ತು ಪಞ್ಞಾವು ಸಹಾ ಸಮತೋಲನವಾಗಿರಬೇಕು. ಸಮಾಧಿಯ ಸ್ಥಾಪನೆಗೆ ಪ್ರಬಲವಾದ ಏಕಾಗ್ರತೆ, ಏಕೀಕರಣ ಬೇಕಾಗುತ್ತದೆ ಇದಕ್ಕಾಗಿ ಅರಿವಿನ (ಪಞ್ಞಾ) ಸಾಕ್ಷಾತ್ಕಾರಕ್ಕಾಗಿ ಸಮಾಧಿಯ ಅತ್ಯವಶ್ಯತೆಯಿದ್ದು ಜೊತೆಗೆ ತೀಕ್ಷ್ಣ ಅರಿವು ಬೇಕಾಗುತ್ತದೆ. ಹೀಗಾಗಿ ಇವೆರಡರ ಸಮತೋಲನ ಅತ್ಯಗತ್ಯವಾಗಿದೆ.
ಇನ್ನು ಉಳಿದಿದ್ದು ಸ್ಮೃತಿಯೊಂದೇ. ಇದು ಎಲ್ಲ ಪರಿಸ್ಥಿತಿಯಲ್ಲೂ ಬೇಕಾಗಿದ್ದು, ಎಲ್ಲದರ ಸಮತೋಲನೆಯಲ್ಲಿ ಪಾತ್ರ ವಹಿಸಿ ಅತಿರೇಕಕ್ಕೆ ಕೊಂಡೊಯ್ಯದೆ ಪ್ರಮುಖ ಪಾತ್ರವಹಿಸುತ್ತದೆ. ಹೇಗೆ ಎಲ್ಲಾ ಸಾರುಗಳಿಗೆ ಉಪ್ಪು ಅಗತ್ಯವೋ, ರಾಜನ ಎಲ್ಲಾ ಕಾರ್ಯಕ್ಕೆ ಪ್ರಧಾನಮಂತ್ರಿ ಎಷ್ಟು ಅವಶ್ಯಕವೋ ಹಾಗೆಯೇ ಸಮಾಧಿಪ್ರಾಪ್ತಿಗೆ ಸ್ಮೃತಿಯು ಅತ್ಯವಶ್ಯಕವಾಗಿದೆ. ಆದ್ದರಿಂದಲೇ ಭಗವಾನರು ಸ್ಮೃತಿಯನ್ನು ಶರಣು, ರಕ್ಷಕ ಎಂದು ಶ್ಲéಾಘಿಸಿದ್ದಾರೆ, ಸ್ಮೃತಿ ಇಲ್ಲದೆ ಯಾವ ಯತ್ನಶೀಲತೆಯೂ ಇಲ್ಲ; ಯಾವ ನಿಗ್ರಹವೂ ಇಲ್ಲ.

3. ನಿಮಿತ್ತಗಳಲ್ಲಿ ಕೌಶಲ್ಯ ಹೊಂದುವಿಕೆ: 

ಅಂದರೆ ಇಲ್ಲದಿದ್ದ ನಿಮಿತ್ತವನ್ನು ಉಂಟಾಗಿಸುವಿಕೆ (ಉದಾ: ಪಠವಿ ಕಸಿಣಾ) ಉದಯಿಸಿದ ನಿಮಿತ್ತವನ್ನು ವಿಕಾಸಗೊಳಿಸುವಿಕೆ, ವಿಕಾಸಿಸಲ್ಪಟ್ಟ ನಿಮಿತ್ತವನ್ನು ರಕ್ಷಿಸುವಿಕೆ. ಈ ಮೂರು ಹಂತಗಳ ಕೌಶಲ್ಯಕ್ಕೆ ನಿಮಿತ್ತಗಳಲ್ಲಿ ಕೌಶಲ್ಯ ಹೊಂದಿರುವಿಕೆ ಎನ್ನುವರು.

4. ಯತ್ನಶೀಲನಾಗಬೇಕಾದ ಸಮಯದಲ್ಲಿ ಪ್ರಯತ್ನಶೀಲನಾಗುವಿಕೆ

ಹೇಗೆಂದರೆ: ಭಿಕ್ಖುಗಳೇ, ಯಾವಾಗ ಮನಸ್ಸು ಜಡತ್ವದಲ್ಲಿರುವುದೋ, ಸೋಮಾರಿತನ ಹೊಂದಿರುತ್ತದೋ ಆ ಸಮಯದಲ್ಲಿ ಧಮ್ಮವಿಷಯ ಸಂಭೋಜ್ಝಂಗ (ಸ್ಥಿತಿಗಳ (ಸತ್ಯಗಳ) ಶೋಧನಾ ಸಂಭೋದಿ ಅಂಗ) ವನ್ನು ವಿರಿಯಾ ಸಂಭೋಜ್ಝಂಗ ಮತ್ತು ಪೀತಿ (ಉತ್ಸಾಹ, ಆನಂದ) ಸಂಬೋಧಿಯ ಅಂಗಗಳನ್ನು ವೃದ್ಧಿಗೊಳಿಸಬೇಕು. ಏಕೆ? ಏಕೆಂದರೆ: ಕುಶಲ ಸ್ಥಿತಿಗಳು ಹಾಗು ಅಕುಶಲ ಸ್ಥಿತಿಗಳು ಒಂದಕ್ಕೊಂದು ಪ್ರತಿರೂಪವಾಗಿದೆ. ಯೋಗ್ಯ ಗಮನಹರಿಸುವಿಕೆಯಿಂದಾಗಿ ಜಡತ್ವದ ಅರಿವು ಉಂಟಾಗುತ್ತದೆ. ಆಗ ಅದಕ್ಕೆ ಪ್ರತಿಯಾಗಿ ಇಲ್ಲದಿದ್ದಂತಹ ಸ್ಥಿತಿ ಶೋಧನ ಸಂಭೋಜ್ಝಂಗ, ಪ್ರಯತ್ನಶೀಲತೆ (ವಿರಿಯಾ) ಸಂಭೋಧಿ ಅಂಗ ಹಾಗು ಉತ್ಸಾಹ (ಆನಂದ ಪೀತಿ) ಸಂಭೋದಿ ಅಂಗವನ್ನು ಉಂಟುಮಾಡಬೇಕು. ಆಗ ಜಡತ್ವವು ಇನ್ನಿಲ್ಲವಾಗುತ್ತದೆ. ಹೀಗೆ ಅತನು ಯತ್ನಶೀಲನಾಗಬೇಕಾದ ಸಮಯದಲ್ಲಿ ಯತ್ನಶೀಲನಾಗುತ್ತಾನೆ.

ಸತ್ಯಶೋಧನೆ ಸಂಭೋಜ್ಝಂಗ (ಧಮ್ಮ ವಿಷಯ ಸಂಬೋಜ್ಝಂಗದ) ಉದಯಕ್ಕೆ ಕಾರಣವಾಗುವ ಏಳು ವಿಷಯಗಳು:
1. ಪ್ರಶ್ನೆಗಳನ್ನು ಕೇಳುವಿಕೆ
2. ಶುಭ್ರತೆ,
3. ಪಂಚೇಂದ್ರಿಯಗಳ ಸಮತೋಲನೆ
4. ಅಪ್ರಜ್ಞಾವಂತರ ನಿರೋಧ
5. ಪ್ರಜ್ಞಾವಂತರ ಸ್ನೇಹ
 6. ಗಂಭೀರ ಜ್ಞಾನಕ್ಷೇತ್ರದ ಅವಲೋಕನೆ
 7. ಸ್ಥಿತಿಗಳ ಪರೀಕ್ಷೆಗಳಲ್ಲಿ ದೃಢತೆ.


ಪ್ರಯತ್ನಶೀಲತೆ ಸಂಬೋಧಿ ಅಂಗಕ್ಕೆ (ವಿರಿಯಾ ಸಂಬೋಜ್ಝಂಗ) ಸಹಾಯವಾಗುವ 11 ಅಂಶಗಳು: 

1. ಯತ್ನಶೀಲನಾಗಿಲ್ಲದಿದ್ದರೆ ಆಗುವ ನಷ್ಟದ, ನಿಂದೆಯ, ಸೋಲಿನ ದುಃಖಗಳ ಭಯಾನಕತೆಯನ್ನು ಅಂದಾಜು ಮಾಡುವಿಕೆ.
2. ಯತ್ನಶೀಲನಾಗಿದ್ದರೆ ಆಗುವ ಲೌಕಿಕ ಲಾಭ ಹಾಗು ಲೋಕೋತ್ತರ ಲಾಭಗಳ ಲೆಕ್ಕಾಚಾರ.
3. ಈ ಮಾರ್ಗವು ಬುದ್ಧರಂತಹರದ್ದು, ಆರ್ಯರದ್ದು, ಯತ್ನಶೀಲರದ್ದು ಹೊರತು ಸೋಮಾರಿಗಳದ್ದಲ್ಲ ಎಂಬ ಗಂಭಿರ ಚಿಂತನೆ ಮಾಡುವುದು.
4. ಯತ್ನಶೀಲರಾಗಿದ್ದರೆ ತಮಗೆ ದಾನ ನೀಡುವವರಿಗೆ ಸಹಾಯವಾಗುತ್ತದೆ.
5. ಪ್ರಯತ್ನದಿಂದಾಗಿಯೇ ಮಹಾನ್ ಸ್ಥಿತಿಗೇರಿದ ಬುದ್ಧರನ್ನು ಕುರಿತು ಹೀಗೆ ಚಿಂತನೆ ಮಾಡುವುದು: ನಮ್ಮ ಶಾಸ್ತರು ಯತ್ನಶೀಲರು, ಈ ಅನನ್ಯ ಧಮ್ಮವು ಅಭ್ಯಾಸದಿಂದಾಗಿಯೇ ಗೌರವಿಸಲ್ಪಡುವುದೇ ಹೊರತು ಬೇರೆ ರೀತಿಯಲ್ಲಿ ಅಲ್ಲ.
6. ಈ ಶ್ರೇಷ್ಠವಾದ ಧಮ್ಮದ ಆಸ್ತಿಯನ್ನು ಕುರಿತು ಪರಿಶೀಲನೆ ಮಾಡಿ ಇದು ಸೋಮಾರಿಗಳಿಗೆ ಸಿಗುವಂತಹದ್ದಲ್ಲ ಎಂದು ಪ್ರೇರಣೆ ಪಡೆಯುವುದು.
7. ಸೋಮಾರಿತನ ಹಾಗು ಜಡತ್ವಗಳನ್ನು ತೊರೆದುಹಾಕುವುದು. ಅದಕ್ಕಾಗಿ ಅಲೋಕಸಞ್ಞೆ, ಆಸನದ ಬದಲಾವಣೆ, ತೆರೆದ ಗಾಳಿಯಲ್ಲಿ ತಿರುಗಾಡುವಿಕೆ ಮಾಡುವುದು.
8. ಸೋಮಾರಿಗಳ ವರ್ಜನೆ
9. ವಿರಿಯವಂತರ ಸ್ನೇಹ
10. ಯತ್ನಶೀಲತೆಯ ಅವಲೋಕನ
11. ಯತ್ನಶೀಲತೆಯಲ್ಲಿ ದೃಢತೆ.

ಆನಂದ ಉತ್ಸಾಹ (ಪೀತಿ ಸಂಭೋಜ್ಝಂಗ) ಸಂಬೋಧಿ ಅಂಗದ ಉದಯಕ್ಕೆ ಕಾರಣವಾದ ನಾಲ್ಕು ಅಂಶಗಳು.

1. ಬುದ್ಧಾನುಸ್ಸತಿ
        2. ಧಮ್ಮಾನುಸ್ಸತಿ
        3. ಸಂಘಾನುಸ್ಸತಿ
        4. ಶೀಲಾನುಸ್ಸತಿ
       5. ತ್ಯಾಗಾನುಸ್ಸತಿ
       6. ದೇವತಾನುಸ್ಸತಿ
       7. ಉಪಸಮಾನುಸ್ಸತಿ
       8. ಉತ್ಸಾಹ (ಆನಂದ) ರಹಿತರಾದವರ ವರ್ಜನೆ
       9. ಉತ್ಸಾಹಿ (ಆನಂದಿತರ)ಗಳ ಸ್ನೆಹ
       10. ಸ್ಫೂತರ್ಿಯುತ ಪ್ರವಚನಗಳ ನೆನಪು ವೃದ್ಧಿಸುವಿಕೆ
       11. ಉತ್ಸಾಹದಲ್ಲೇ ತೊಡಗಿರುವಿಕೆ.

5. ನಿಗ್ರಹಿಸಬೇಕಾದ ಸಮಯದಲ್ಲಿ ನಿಗ್ರಹಿಸುವಿಕೆ:

ಇದರ ಬಗ್ಗೆ ಭಗವಾನರು ಹೀಗೆ ನುಡಿದಿದ್ದಾರೆ: ಭಿಕ್ಷುಗಳೇ, ಯಾವಾಗ ಮನಸ್ಸು ಕ್ಷೊಭೆಗೆ, ಉದ್ವೇಗಗಳಿಗೆ ಸಿಲುಕಿ ಹೋಗಿರುವುದೋ ಅಂತಹ ಸಮಯದಲ್ಲಿ ಪಸ್ಸದ್ದಿ ಸಂಬೋಜ್ಜಂಗ (ಪ್ರಸನ್ನತೆಯ/ಪ್ರಶಾಂತತೆಯ ಸಂಬೋಧಿ ಅಂಗ) ವನ್ನು ಸಮಾಧಿ ಸಂಭೋಧಿ ಅಂಗವನ್ನು ಮತ್ತು ಉಪೇಕ್ಷೆಯ ಸಂಬೋಧಿ ಅಂಗವನ್ನು ವೃದ್ಧಿಗೊಳಿಸಬೇಕು. ಏಕೆಂದರೆ ಈ ಸ್ಥಿತಿಗಳಿಂದ ಆ ಅಕುಶಲ ಕ್ಷೊಭೆಗಳು ಶಾಂತವಾಗಿಬಿಡುತ್ತವೆ.

ಪ್ರಸನ್ನತೆ (ಪ್ರಶಾಂತತೆ) ಸಂಬೋಧಿ ಅಂಗದ ಉದಯಿಸುವಿಕೆಗೆ ಕಾರಣವಾದ ಏಳು ಅಂಗಗಳು: 

1. ಉತ್ತಮ ಆಹಾರ ಸೇವನೆ,
 2. ಉತ್ತಮ ವಾತಾವರಣದಲ್ಲಿ ಜೀವಿಸುವಿಕೆ,
 3. ಸುಖಕರವಾದ ಆಸನದ ಅಭ್ಯಾಸ,
 4. ಕೋಪಿಗಳ ವರ್ಜನೆ,
 5. ಪ್ರಶಾಂತ ಸ್ವರೂಪಿಗಳ ಸ್ನೇಹ
 6. ಪ್ರಶಾಂತತೆಯಲ್ಲಿ ದೃಢತೆ.

ಸಮಾಧಿ ಸಂಬೋಧಿ ಅಂಗಕ್ಕೆ ಕಾರಣವಾದ 11 ಅಂಶಗಳು:

 1. ಶುಭ್ರತೆ,
2. ನಿಮಿತ್ತ (ಚಿಹ್ನೆ)ಗಳ ಕೌಶಲ್ಯ
3. ಧ್ಯಾನ ಪಚೇಂದ್ರಿಯಗಳ ಸಮತೋಲನ
 4. ಸಕಾಲ ನಿಗ್ರಹ
 5. ಸಕಾಲ ಶ್ರಮ
 6. ಸಕಾಲ ಪ್ರೇರಣೆ
7. ಉಪೇಕ್ಖಾವೃದ್ಧಿ
 8. ಸಮಾಧಿರಹಿತರ ವರ್ಜನೆ
 9. ಸಮಾಧಿವಂತರ ಸ್ನೇಹ
10. ಸಮಾಧಿಯ ಅವಲೋಕನ
11. ಸಮಾಧಿಯಲ್ಲಿ ದೃಢಸಂಕಲ್ಪ.

ಉಪೇಕ್ಖಾ ಸಂಬೋಜ್ಝಂಗಕ್ಕೆ ಕಾರಣವಾದ ಐದು ಅಂಶಗಳು:

 1. ಜೀವಿಗಳ ಬಗ್ಗೆ ನಿಲರ್ಿಪ್ತತೆ (ಉಪೇಕ್ಖಾ ಭಾವನೆ ಅಂಟದಿರುವಿಕೆ)
2. ಸಂಖಾರಗಳ (ಮನೋನಿಮರ್ಿತಿ) ಬಗ್ಗೆ ಉಪೇಕ್ಷೆ
3. ಸ್ನೇಹಪರರ ಹಾಗು ಭಾವಾವೇಷಿಗಳ ವರ್ಜನೆ
4. ನಿಲರ್ಿಪ್ತರ ಮಿತ್ರತ್ವ
5. ಉಪೇಕ್ಷೆಯಲ್ಲಿ ದೃಢತೆ.


6. ಪ್ರೋತ್ಸಾಹಿಸಬೇಕಾದ ಸಂದರ್ಭದಲ್ಲಿ ಮನಸ್ಸನ್ನು ಪ್ರೇರೇಪಿಸುವುದು:

ಯಾವಾಗ ಮನಸ್ಸು ನಿರುತ್ಸಾಹದಿಂದ ಕೂಡಿರುವುದೋ ಜೊತೆ ಜಡತೆಯಿಂದ ಆಕ್ರಮಿತವಾಗಿರುವುದೋ ಉತ್ಸಾಹಗೊಳಿಸಲು ಅಥವಾ ಆನಂದಿತವಾಗಲು ವಿಫಲವಾಗಿರುವುದೋ ಆಗ ಆಷ್ಟಬಗೆಯ ಸಂವೇಗ ಚಿಂತನೆಯಿಂದ ಮನಸ್ಸನ್ನು ಸ್ಫೂತರ್ಿಗೊಳಿಸುವುದು. ಅವೆಂದರೆ: ಜನ್ಮ ಮುಪ್ಪು, ರೋಗ, ಮರಣ, ಅಪಾಯ ಲೋಕಗಳ ದುಃಖ, ಹಿಂದಿನ ಜನ್ಮಗಳ ಕರ್ಮಫಲಗಳಿಂದ ಈ ಜನ್ಮದಲ್ಲಿ ಬರುವ ದುಃಖ, ಭವಿಷ್ಯದಲ್ಲಿ ಜನ್ಮ ತಪ್ಪಿಸಲಾಗದೆ ಅನುಭವಿಸಬೇಕಾಗಿರುವ ದುಃಖ, ವರ್ತಮಾನದಲ್ಲಿ ಆಹಾರಕ್ಕಾಗಿ ಅಲೆಯುತ್ತ ಸಿಗುತ್ತಿರುವ ದುಃಖ. ಹೀಗೆ ಈ ದುಃಖಗಳನ್ನು ತಪ್ಪಿಸಲೇಬೇಕಂದು ಪುನಃ ಜಾಗೃತಿ ಹೊಂದುವುದು, ಚಾಲನಾಶಕ್ತಿಯನ್ನು ನೀಡುವುದು. ಹಾಗೆಯೇ ಬುದ್ಧ, ಧಮ್ಮ ಮತ್ತು ಸಂಘದ ಅನುಸ್ಮೃತಿ ಮಾಡಿ ಅವುಗಳಲ್ಲಿ ಅಪಾರ ಶ್ರದ್ಧೆ ತಾಳುವುದು. ಹೀಗೆ ಭಿಕ್ಖುವು ಮನಸ್ಸನ್ನು ಪ್ರೋತ್ಸಾಹಿಸಿಕೊಳ್ಳುತ್ತಾನೆ.

7. ಉಪೇಕ್ಷಾ (ಸಮಚಿತ್ತತೆಯಿಂದ) ದಿಂದ ನೋಡಬೇಕಾದ (ಇರಬೇಕಾದ) ಸಂದರ್ಭದಲ್ಲಿ ಉಪೇಕ್ಷಯಿಂದ ಇರುವಿಕೆ

ಯಾವಾಗ ಭಿಕ್ಖುವು ಈ ರೀತಿಯಾಗಿ ಪ್ರಶಾಂತತೆಯ ಹಾದಿಯಲ್ಲಿ ಸಾಗುತ್ತಿರುವನೋ, ವಿಷಯಗಳಲ್ಲಿ ಸಮನಾಗಿರುವನೋ, ಸೋಮಾರಿಯಾಗಿರದೆ, ಕ್ಷೊಭೆಯಿಲ್ಲದೆ, ಅಲಕ್ಷವಿಲ್ಲದೆ ಇರುವನೋ ಆಗ ಆತನು ಶ್ರಮಿಸುವುದರಲ್ಲಿಯಾಗಲಿ, ನಿಗ್ರಹಿಸುವುದರಲ್ಲಿಯಾಗಲಿ ಅಥವಾ ಪ್ರೋತ್ಸಾಹಿಸುವುದರಲ್ಲಿಯಾಗಲಿ ಆಸಕ್ತನಾಗಿರುವುದಿಲ್ಲ. ಯಾರ ಕುದುರೆಗಳು ಸಮವಾಗಿ ಸಾಗುತ್ತಿರುವವೋ ಅಂತಹ ಕುದುರೆಗಳ ಸಾರಥಿಯಂತೆ ಆ ಭಿಕ್ಖುವು ಉಪೇಕ್ಷೆಯಿಂದ ವಿಹರಿಸುತ್ತಾನೆ.

8. ಸಮಾಧಿರಹಿತರ ವರ್ಜನೆ: 

ಯಾವ ಜನರು ತ್ಯಾಗದ ಹಾದಿಯನ್ನೇ ತುಳಿದಿಲ್ಲವೋ, ಸದಾ ಪ್ರಾಪಂಚಿಕ ವ್ಯವಹಾರಗಲ್ಲಿ ಚಟುವಟಿಕೆಯಿಂದಿರುವರೋ ಹಾಗು ಯಾರ ಮನಸ್ಸು ಚದುರಿಹೋಗಿವೆಯೋ ಅಂತಹವರಿಂದ ತುಂಬ ದೂರವಿರಿ.

9. ಸಮಾಧಿ ಪ್ರಾಪ್ತರೊಡನೆ ಮಾತ್ರ ಇರುವಿಕೆ:

ಯಾರು ತ್ಯಾಗದ ಹಾದಿಯಲ್ಲಿ ಇರುವರೋ ಮತ್ತು ಸಮಾಧಿಸಿದ್ಧರೋ ಅಂತಹವರ ಸಾನಿಧ್ಯದಲ್ಲಿ ಆಗಾಗ್ಗೆ ಇರುವಿಕೆ.

10. ಸಮಾಧಿಯೊಂದಿಗೆ ದೃಢನಿಷ್ಠನಾಗಿರುವುದು:

ಸಮಾಧಿಯ ಬಗ್ಗೆ ಮಹತ್ವತೆ ವಹಿಸುವುದು, ಧ್ಯಾನದ ಬಗ್ಗೆ ಬಾಗಿರುವುದು, ಕಲಿಯುವುದು. ಆ ದಿಕ್ಕಿನಲ್ಲಿ ಸಾಗಿ ಸಮಾಧಿಪ್ರಾಪ್ತಿ ಮಾಡುವಿಕೆ. ಎಲ್ಲ ಹಂತಗಳ ಪ್ರಾಪ್ತಿಯಾಗುವವರೆಗೂ ನಿರಂತರ ಸಾಗುತ್ತಿರುವುದು.
ಹೀಗೆ 10 ವಿಧದ ಸಮಾಧಿ ಕೌಶಲ್ಯ ಸಾಧಿಸುವುದು.


ನಾಲ್ಕು ಸಾಮ್ಯತೆಯಿಂದ ಸಮಾಧಿಯ ವಿವರಣೆ

1. ಚತುರ ಜೇನುನೊಣವು ಸಮತೋಲಿತವಾದ ವೇಗದಿಂದ ಹೂವಿನ ಗೊಂಚಲಿಗೆ ಬಂದು ಬೇಕಾದಷ್ಟು ರೇಣುವನ್ನು ಸಂಗ್ರಹಿಸಿ ಜೇನನ್ನು ಆಸ್ವಾದಿಸುವಂತೆ.
2. ಶಸ್ತ್ರಚಿಕಿತ್ಸೆಯ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ಪಲ (ಕಮಲ) ದಳಕ್ಕೆ ಮೇಲ್ಪದರ ಮಾತ್ರ ಕತ್ತರಿಸಲು ನುಡಿಯುತ್ತಾರೆ, ಅದರಲ್ಲಿ ಆತುರಗಾರನು ಉತ್ಪಲ ದಳವನ್ನೇ ಎರಡು ಭಾಗವಾಗಿ ತನ್ನ ಬಲಪ್ರಯೋಗದಿಂದ ಕತ್ತರಿಸಿಬಿಡುತ್ತಾನೆ. ಭಯಭೀತ ವಿದ್ಯಾಥರ್ಿಯು ಆ ಸಮವಾಗಿರುವ ಉತ್ಪಲದಳವನ್ನು ಮುಟ್ಟಲು ಹೆದರುತ್ತಾನೆ. ಕುಶಾಗ್ರಮತಿ ವಿದ್ಯಾಥರ್ಿಯು ಉತ್ಪಲದಳವನ್ನು ಹೆದರದೆ ಹಾಗೆಯೇ ಎರಡು ಹೋಳು ಆಗದೆಯೇ ಮೇಲ್ಪದರ ಮಾತ್ರ ಸೀಳುತ್ತಾನೆ.
3. ಅದೇರೀತಿ ಜೇಡರ ಬಲೆಯಿಂದ ದಾರವನ್ನು ಸಂಗ್ರಹಿಸುವವನು ಒರಟಾಗಿ ನಡೆದುಕೊಂಡರೆ ಅದು ಕತ್ತರಿಸಲ್ಪಡು ವುದು. ಹಾಗೆಂದುಕೊಂಡು ಮುಟ್ಟಲು ಹೆದರಿದರೆ ಕಾರ್ಯವಾಗದು. ಅದಕ್ಕೆ ಸಮತೋಲಿತ ಕ್ರಮವು ಅತ್ಯಗತ್ಯವಾಗಿದೆ.
4. ಅದೇರೀತಿ ಎಣ್ಣೆಯನ್ನು ಚೆಲ್ಲದೆ ಸಮತೋಲಿತವಾಗಿ ತುಂಬಿಸುವಂತೆ ಧ್ಯಾನವನ್ನು ಅಭ್ಯಸಿಸಬೇಕು.
ಹೇಗೆಂದರೆ: ಧ್ಯಾನಾವಸ್ಥೆಯಲ್ಲಿ ಚಿಹ್ನೆಯು ಉದಯಿಸಿದಾಗ ನಾನು ಕೂಡಲೆ ಸಮಾಧಿಪ್ರಾಪ್ತಿ ಮಾಡಲಿದ್ದೇನೆ ಎಂದು ಆತನು ಪರಿಶ್ರಮವನ್ನು ಒತ್ತಾಯಪಡಿಸುವ ಹಾಗಿಲ್ಲ. ಏಕೆಂದರೆ, ಉದ್ವೇಗಕ್ಕೆ ಒಳಗಾಗಿ ಧ್ಯಾನಪ್ರಾಪ್ತಿಯಿಂದ ದೂರ ಉಳಿಯುವ ಸಾಧ್ಯತೆಯಿರುತ್ತದೆ. ಹೀಗಾದಾಗ ಆತನ ಪರಿಶ್ರಮವನ್ನು ಸಡಿಲಗೊಳಿಸಿ ತಾನು ಸೋಮಾರಿಯಾದರೂ ಆ ಸಡಿಲಿಕೆಯಿಂದಾಗಿ ಆತನ ಸಮಾಧಿಪ್ರಾಪ್ತಿಯಿಂದ ದೂರಾಗುತ್ತಾನೆ.
ಆದರೆ ವಿವೇಕಿಯು ಸ್ವಲ್ಪ ಸೋಮಾರಿತನವಿದ್ದಾಗಲೇ ಅದನ್ನು ದೂರೀಕರಿಸಿ ಹಾಗೆಯೇ ಸ್ವಲ್ಪ ಉದ್ವೇಗ ಉಂಟಾದಾಗ ಆಗಲೇ ಅದನ್ನು ದೂರೀಕರಿಸಿದಾಗ, ಚಿಹ್ನೆಯು (ನಿಮಿತ್ತ) ಉಂಟಾದಾಗ ಅತ್ಯಂತ ಸಮತೋಲಿತವಾಗಿ ಶ್ರಮಿಸಿದಾಗ ಆತನು ಸಮಾಧಿ ಪ್ರಾಪ್ತಿಮಾಡುತ್ತಾನೆ.

ನಿಮಿತ್ತಾಭಿಮುಖವಾಗಿ ಪ್ರಥಮ ಝಾನ ಗೋಚರಿಸುವಿಕೆ:

ಈ ವಿಧವಾಗಿ ಆತನು ತನ್ನ ಮನಸ್ಸನ್ನು ಮಾರ್ಗದರ್ಶನ ನೀಡುತ್ತಾ ನಿಮಿತ್ತಕ್ಕೆ (ಚಿಹ್ನೆ) ಮುಖಾಮುಖಿಯಾಗುತ್ತಾನೆ. ಆಗ ಆತನಿಗೆ ಅಪ್ಪಣ (ಸ್ಥಿರ) ಧ್ಯಾನಸಿದ್ಧಿಯಾಗುವುದೆಂದು ಅರಿವಾಗುತ್ತದೆ. ಆಗ ಭವಾಂಗವು ಭಂಗವಾಗಿ ಆತನು ಮಹಾದ್ವಾರದ ಮೂಲಕವಾಗಿ (ಮನೋದ್ವಾರವಜ್ಜನ) ಪಠವಿ ಧ್ಯಾನದ ನಿಮಿತ್ತದಿಂದಲೇ ಅದೇ ಆಲಂಬನದಿಂದಲೇ ನಾಲ್ಕು ಅಥವಾ ಐದು ಜವನ (ಪ್ರೇರೇಪಣಾ/ವೇಗ) ಚಿತ್ತವೂ (ವೇಗವಾಗಿ ಆಲಂವನೆಯಿಂದ ಅನುಭವವನ್ನು ನೀಡುವಂತಹುದು) ಪ್ರೇರೇಪಿಸುತ್ತದೆ. ಅದರಲ್ಲಿ ಸಾಧಾರಣ ಚಿತ್ತಕ್ಕಿಂತ ಬಲಯುತವಾದ ವಿತಕ್ಕ, ವಿಚಾರ, ಪೀತಿ, ಸುಖ, ಏಕಾಗ್ರತೆಯಿಂದ ಕೂಡಿದ ಕೊನೆಯ ಒಂದು ರೂಪವಚರ ಚಿತ್ತವು ಉದಯಿಸುತ್ತದೆ, ಮಿಕ್ಕವು ಕಾಮವಚರ ಚಿತ್ತಗಳು. ಅವನ್ನು ಪ್ರಾಥಮಿಕ ಪರಿಕಮ್ಮದಿಂದಾಗಿರಬಹುದು. ಏಕೆಂದರೆ, ಪ್ರಾಥಮಿಕ ಕ್ರಿಯೆಯಿಂದ ಅಭಿವೃದ್ಧಿಗೊಂಡು ಉಂಟಾಗಿರುತ್ತವೆ. ಇವನ್ನು ಸಾಮಾನ್ಯ ಸಮಾಧಿ ಎನ್ನುವರು. (ಹೇಗೆಂದರೆ: ಹಳ್ಳಿಗೆ ಸಮೀಪವಾಗಿದೆ, ಪಟ್ಟಣಕ್ಕೆ ಸಮೀಪವಾಗಿದೆ ಎಂಬ ಅರ್ಥದಲ್ಲಿ) ಸ್ಥಿರ (ಅಪ್ಪಣ) ಸಮಾಧಿಗೆ ಸಮೀಪವಾಗಿದೆ ಎಂದರ್ಥವಾಗಿದೆ. ಹಾಗು ಈ ಚಿತ್ತಕ್ರಿಯೆಯಲ್ಲಿ ಈ ಬಗೆಯದಕ್ಕೆ ಗೋತ್ರಭು ಎನ್ನುವರು. ಏಕೆಂದರೆ, ಇಂದ್ರಿಯ ಸಮ್ರಾಜ್ಯದಿಂದ (ಕಾಮವಚರ) ರೂಪವಚರಕ್ಕೆ (ಸಮಾಧಿ ಸಾಮ್ರಾಜ್ಯಕ್ಕೆ) ಗೋತ್ರಕ್ಕೆ) ಬದಲಾವಣೆ ಹೊಂದುವುದರಿಂದಾಗಿ.
ಹೀಗೆ ಚಿತ್ತ ಪ್ರಕ್ರಿಯೆಯು ಸಾಗುವುದು, ಮೊದಲು ಪರಿಕಮ್ಮ (ಪ್ರಾಥಮಿಕ), ಎರಡನೆಯದು ಉಪಚರ (ಸಾಮಿಪ್ಯ), ಅನುಲೋಮ (ದೃಢೀಕೃತ) ಮತ್ತು ನಾಲ್ಕನೆಯದೇ ಗೋತ್ರಭು (ಇಂದ್ರಿಯ ಗೋತ್ರದಿಂದ ಸಮಾಧಿ ಗೋತ್ರಕ್ಕೆ ಬದಲಾವಣೆ). ನಂತರದ ಐದನೇ ಚಿತ್ತವೇ ಅಪ್ಪಣಚಿತ್ತ (ಸ್ಥರ ಸಮಾಧಿಯ) ರೂಪುಗೊಳ್ಳುತ್ತದೆ.
ಹಿಂದಿನ ಕುಶಲ ಸ್ಥಿತಿಗಳೇ ಇವಕ್ಕೆ ಕಾರಣಕರ್ತವಾಗಿ, ಪುನರಾವತರ್ಿತವೇ ಸ್ಥಿತಿಯಾಗಿ. ಕುಶಲ (ಸಮಾಧಿ) ಸ್ಥಿತಿಗಳಾಗಿ ಯಶಸ್ವಿಯಾಗುವುವು ಎಂದು ಅಭಿಧಮ್ಮ ವಿದ್ಯಾಂಸ ಥೇರ ಗೊದತ್ತರು ಹೇಳುತ್ತಾರೆ.
ಆದರೆ ಈ ಸಮಾಧಿಯು ಕೇವಲ ಏಕ ಚಿತ್ತಕ್ಷಣವಾಗಿದೆ. ಏಳು ಸ್ಥಿತಿಗಳಲ್ಲಿ ಕಾಲವಿಚ್ಛೇದವು ಇರುವುದಿಲ್ಲ. ಅವೆಂದರೆ: ಪ್ರಥಮ ಧ್ಯಾನ, ಲೋಕಿಯ ಅಭಿಜ್ಞಾ ಜ್ಞಾನಗಳಲ್ಲಿ, ನಾಲ್ಕು ಮಾರ್ಗಗಳಲ್ಲಿ, ನಾಲ್ಕು ಫಲಗಳಲ್ಲಿ, ರೂಪ ಅರೂಪ ಭವದ ಭವಂಗ ಜ್ಞಾನದಲ್ಲಿ, ನಿರೋಧದ ಕಾರಣೀಕೃತ ಸಂಬಂಧದಲ್ಲಿ, ನೇವಸಞ್ಞನಾಸಞ್ಞಾಯತನದಲ್ಲಿ ಮತ್ತು ನಿರೋಧದಿಂದ ಹೊರಬಂದ ನಂತರ ಫಲಪ್ರಾಪ್ತಿ ವೇಳೆ, ಇಲ್ಲಿ ಮಾಗರ್ಾಂತರದ ಫಲ ಮೂರಕ್ಕಿಂತ ಮೇಲೆ ಇರಬಾರದು. ನಿರೋಧ ಅಂಗೀಕೃತ ಸಂಬಂಧದಲ್ಲಿ ಮತ್ತು ನೇವಸಞ್ಞನಾಸಞ್ಞಾಯತನದಲ್ಲಿ ಎರಡಕ್ಕಿಂತ ಹೆಚ್ಚು ಇರಬಾರದು. ರೂಪ ಅರೂಪ ಭವದ ಭವಂಗ ಜ್ಞಾನದಲ್ಲಿ ಪರಿಣಾಮವೂ ಇರುವುದಿಲ್ಲ. ಉಳಿದವುಗಳಲ್ಲಿ ಕೇವಲ ಒಂದೇ ಇರುತ್ತದೆ. ಹೀಗಾಗಿ ಅಪ್ಪಣ ಸಮಾಧಿ (ಸ್ಥಿರ ಸಮಾಧಿ) ಯಲ್ಲಿ ಏಕಚಿತ್ತಕ್ಷಣವಿರುತ್ತದೆ. ನಂತರ ಅದು ಸಹಾ ಭವಂಗದಲ್ಲಿ ಜಾರಿ ಹೋಗುವುದು. ಇದಾದನಂತರ ಝಾನದ ಅವಲೋಕನ ಸಂಕಲ್ಪದಿಂದಾಗಿ ಭವಂಗವು ಭಂಗವಾಗುತ್ತದೆ. ಆನಂತರವೇ ಧ್ಯಾನದ ಅವಲೋಕನ ಆರಂಭವಾಗುತ್ತದೆ.


ಪ್ರಥಮ ಝಾನ ಕಥಾ:

ಇಲ್ಲಿ ಆತನು ಸಮಾಧಿ ಇತರ ಎಲ್ಲಾ ಇಂದ್ರೀಯ ಬಯಕೆಗಳಿಂದ ಮುಕ್ತನಾಗಿ, ಅಕುಶಲ ವಿಷಯಗಳಿಂದ ಮುಕ್ತವಾಗಿ, ಪ್ರಥಮ ಝಾನದಲ್ಲಿ ಪ್ರವೇಶಿಸಿ, ನೆಲೆಸುತ್ತಾನೆ. ಆ ಸ್ಥಿತಿಯು ವಿತಕ್ಕ (ಒಂದು ವಿಷಯದಲ್ಲಿ ಕೇಂದ್ರೀಕೃತವಾಗಿ) ವಿಚಾರ (ಅದರಲ್ಲೇ ಹರಿಯುತ್ತ ಪ್ರವಹಿಸುತ್ತಾ) ಸುಖ ಹಾಗು ಏಕಾಂತದ ಆನಂದದಿಂದ (ಪೀತಿ) ಕೂಡಿರುತ್ತದೆ. ಹೀಗೆ ಆತನು ಪ್ರಥಮ ಝಾನವನ್ನು ಪ್ರಾಪ್ತಿಮಾಡಿರುತ್ತಾನೆ. ಈ ಪಠವಿ ಕಸಿಣಾದ ಸಮಾಧಿಯು (ಝಾನ) ಐದು ನೀವರಣ (ಅಡ್ಡಿ) ಗಳನ್ನು ವಜರ್ಿಸಿರುತ್ತದೆ ಹಾಗು ಐದು ಅಂಗಗಳನ್ನು (ಧ್ಯಾನಾಂಗ) ಹೊಂದಿರುತ್ತದೆ. ಮೂರು ವಿಧಗಳಲ್ಲಿ ಶುಭ (ಒಳ್ಳೆಯ) ವಾಗಿದ್ದು, ಹತ್ತು ಲಕ್ಷಣಗಳಿಂದ ಕೂಡಿರುತ್ತದೆ.

ಪ್ರಥಮ ಝಾನ : 

ಇಲ್ಲಿ ಭಿಕ್ಷುವು ಕಾಮ (ಇಂದ್ರೀಯ ಬೋಗಾಭಿಲಾಷೆ) ಗಳಿಂದ ಪ್ರತ್ಯೇಕವಾಗಿ (ದೂರವಾಗಿ) ಅಕುಶಲ ವಿಷಯಗಳಿಂದ (ರಾಗ, ದ್ವೇಷ, ಮೋಹ) ವಿಮುಖವಾಗಿ ಆತನು ಪ್ರಥಮ ಝಾನ (ಧ್ಯಾನ/ಸಮಾಧಿ)ದಲ್ಲಿ ವಿಹರಿಸುತ್ತಾನೆ. ಈ ಪ್ರಥಮ ಝಾನವು ವಿತಕ್ಕ (ಗಮನ ಕೇಂದ್ರೀಕರಿಸುವಿಕೆ) ವಿಚಾರಗಳಿಂದ (ನಿರಂತರ ಗಮನಹರಿಸುವಿಕೆ) ಕೂಡಿ ಅಕುಶಲಗಳಿಂದ ಪ್ರತ್ಯೇಕವಾದ, ಏಕಾಂತದಿಂದ ಲಭಿಸಿದ ಪ್ರೀತಿ (ಆನಂದ) ಮತ್ತು ಸುಖದಿಂದ (ದಿವ್ಯಶಾಂತತೆ) ಕೂಡಿದ ಪ್ರಥಮ ಝಾನವನ್ನು ಪ್ರಾಪ್ತಿ ಮಾಡುತ್ತಾನೆ. ಈ ಪ್ರಥಮ ಝಾನವು 5 ನಿವರಣಗಳಿಂದ ಮುಕ್ತವಾಗಿರುತ್ತದೆ. 5 ಅಂಗಗಳಿಂದ ಕೂಡಿರುತ್ತದೆ. (ವಿತಕ್ಕ ವಿಚಾರ, ಪ್ರೀತಿ, ಸುಖ, ಏಕಾಗ್ಗತ) 3 ರೀತಿಯಲ್ಲಿ ಹಿತಕಾರಿ (ಆದಿ ಮಧ್ಯಮ ಮತ್ತು ಅಂತ್ಯ) ಮತ್ತು 10 ಲಕ್ಷಣಗಳಿಂದ ಕೂಡಿರುತ್ತದೆ.
ಇಂದ್ರೀಯ ಬಯಕೆಗಳು ಝಾನಕ್ಕೆ ಖಂಡಿತವಾಗಿ ಹೊಂದಿಕೆಯಾಗುವುದಿಲ್ಲ. ಇಂದ್ರಿಯ ಬಯಕೆಗಳು ಇದ್ದಾಗ ಝಾನ ಇರಲಾರದು. ಹೇಗೆಂದರೆ ಎಲ್ಲಿ ಕತ್ತಲೆಯಿರುವುದೋ ಅಲ್ಲಿ ದೀಪವಿರುವುದಿಲ್ಲ. ಜೊತೆಗೆ ಅಕುಶಲ ವಿಷಯಗಳೆಂದರೆ ಪಂಚನೀವರಣಗಳೇ ಆಗಿದೆ. ಇಂದ್ರೀಯ ಬಯಕೆಗಳನ್ನು ಹೇಳಲಾಗಿದೆ. ಇನ್ನು ಉಳಿದವುಗಳೆಂದರೆ: ದ್ವೇಷ, ಸೋಮಾರಿತನ, ಪಶ್ಚಾತ್ತಾಪ ಮತ್ತು ಸಂದೇಹ.

ಪಂಚನೀವರಣಗಳಿಗೆ ಪ್ರತಿಪಕ್ಷವಾಗಿ ಪಂಚ ಧ್ಯಾನಂಗಗಳು:

ಏಕಾಗ್ರತೆಯು (ಸಮಾಧಿಯು) ಕಾಮಚಂದಕ್ಕೆ (ಇಂದ್ರಿಯ ಬಯಕೆಗಳಿಗೆ) ಪ್ರತಿಪಕ್ಷವಾಗಿದೆ (ಹೊಂದಾಣಿಕೆಯಾಗಲಾರದಂಹದ್ದಾಗಿದೆ). ಅದೇರೀತಿ ಪೀತಿ (ಆನಂದ)ಯು ದ್ವೇಷಕ್ಕೆ (ವ್ಯಾಪಾದ) ಪ್ರತಿಪಕ್ಷವಾಗಿದೆ. ಹಾಗೆಯೇ ವಿತರ್ಕವು (ಕೇಂದ್ರೀಕೃತ) ಮಾನಸಿಕ ಸೋಮಾರಿತನವಾದ ಹಾಗು ಸೋಮಾರಿತನಕ್ಕೆ ಪ್ರತಿಪಕ್ಷವಾಗಿದೆ. ಅದರಂತೆಯೇ ಸುಖವು ಅವಿಶ್ರಾಂತ ಮನಸ್ಸು ಮತ್ತು ಪಶ್ಚಾತ್ತಾಪಕ್ಕೆ ಪ್ರತಿಪಕ್ಷವಾಗಿದೆ ಮತ್ತು ಹಾಗೆಯೇ ವಿಚಾರವೂ (ಚಿಂತನೆ ಅಥವಾ ಧ್ಯಾನ ವಿಷಯದತ್ತ ಹರಿಯುವ ಚಿತ್ತ). ಸಂದೇಹಕ್ಕೆ ಅಥವಾ ಅನಿಧರ್ಾರಕ್ಕೆ ಪ್ರತಿಪಕ್ಷವಾಗಿದೆ (ಹೊಂದಾಣಿಕೆಯಾಗಲಾರದಂತಹುದು).

ಧ್ಯಾನಂಗಗಳ ಪರಿಚಯ:

ವಿತಕ್ಕ: 

ಇಲ್ಲಿ ಸಂಪರ್ಕ ಉಂಟುಮಾಡುವ ಯೋಜನೆಯೇ ವಿತಕ್ಕವಾಗಿದೆ. ಅಂದರೆ ವಿಶೇಷವಾಗಿ ತಕರ್ಿಸುವುದು ಹಾಗು ಊಹಿಸುವುದೇ ವಿತರ್ಕವಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ಗುರಿಯಿಡುತ್ತಾ ಇರುವಿಕೆಯೇ ವಿತಕ್ಕವಾಗಿದೆ. ವಿತಕ್ಕದ ಪ್ರಮುಖ ಲಕ್ಷಣವೆಂದರೆ ಮನಸ್ಸನ್ನು ಧ್ಯಾನವಿಷಯದೆಡೆಗೆ (ಇಲ್ಲಿ ಪಠವಿ ಕಸಿಣ ಮಂಡಲದೆಡೆಗೆ) ಕೇಂದ್ರೀಕರಿಸುವುದು ಆಗಿದೆ. ವಿತಕ್ಕದ ಕ್ರಿಯೆ ಏನೆಂದರೆ ಗುರಿಯತ್ತ ನುಗ್ಗುತ್ತ ಹೋಗುವುದು. ಮನಸ್ಸನ್ನು ಧ್ಯಾನ ವಿಷಯದೆಡೆಗೆ, ಚಿತ್ತವನ್ನು ಮುಂದಾಳತ್ವ ವಹಿಸಿ ಸಾಗುವುದರಿಂದಾಗಿ ಇದು ವ್ಯಕ್ತವಾಗುತ್ತದೆ.

ವಿಚಾರ:

 ಇಲ್ಲಿ ಬೆಂಬಲವಾಗಿಸಿ ಸಾಗುವ ಯೋಚನೆಯೇ ವಿಚಾರವಾಗಿದೆ. ಅಂದರೆ ನಿರಂತರ ಅನುಸಂಚರಣ ಎಂದರ್ಥ. ವಿಚಾರ ಲಕ್ಷಣವೇನೆಂದರೆ ಧ್ಯಾನ ವಿಷಯದ ಮೇಲೆ ನಿರಂತರ ಒತ್ತಡ ಹಾಕುವುದು. ಅಥವಾ ಪರೀಕ್ಷಿಸುತ್ತಿರುವಿಕೆ. ವಿಚಾರದ ಕ್ರಿಯೆ ಏನೆಂದರೆ ಚಿತ್ತವನ್ನು ವಿಷಯ (ಆಲಂಬನ) ದಲ್ಲಿ ಮುಳುಗಿಸುವಿಕೆ, ಚಿತ್ತವು ಆಲಂಬನ (ಧ್ಯಾನ ವಿಷಯದ) ಮೇಲೆ ಲಂಗರು ಹಾಕಿರುವಂತೆ ಹರಿಯುತ್ತಿರುವುದರಿಂದಾಗಿ ವಿಚಾರವು ವ್ಯಕ್ತವಾಗುತ್ತದೆ.

ವಿತರ್ಕ ಹಾಗು ವಿಚಾರಕ್ಕೆ ಇರುವ ವ್ಯತ್ಯಾಸ ಈ ಕೆಳಗಿನ ಉದಾಹರಣೆಯಿಂದ ತಿಳಿಯಬಹುದು. ಗಂಟೆ ಹೊಡೆದಾಗ ಉಂಟಾದ ಶಬ್ದವು ವಿತರ್ಕವಾದರೆ, ಆ ಧ್ವನಿಗಳ ಪ್ರತಿಧ್ವನಿಗಳು ವಿಚಾರವಾಗುತ್ತದೆ. ಪಕ್ಷಿಯು ಹಾರಲು ಆಕಾಶಕ್ಕೆ ನೆಗೆಯುವುದು ವಿತಕ್ಕವಾದರೆ, ನಿರಂತರ ರೆಕ್ಕೆ ಬಡಿಯುತ್ತಾ, ಸಮತೋಲನ ಸಾಧಿಸುವುದು ವಿಚಾರವಾಗುತ್ತದೆ. ಮಧುವೊಂದು ಕಮಲದ ಬಳಿ ಆಕರ್ಷಕವಾಗಿ ಬರುವುದು ವಿತರ್ಕವಾದರೆ, ಆ ಹೂವಿನ ಸುತ್ತಲೇ ಗುಂಯ್ಗುಡುತ್ತ ಸುತ್ತಾಡುತ್ರಿರುವುದು ವಿಚಾರವಾಗುತ್ತದೆ.
ಒಂದು ಪಾತ್ರೆಯನ್ನು ಹಿಡಿಯುವುದು ವಿತರ್ಕವಾದರೆ ಉಜ್ಜುವುದು ವಿಚಾರವಾಗುತ್ತದೆ. ಅದೇರೀತಿಯಲ್ಲಿ ಚಿತ್ತವನ್ನು ಕೇಂದ್ರೀಕರಿಸುವುದು ವಿತರ್ಕವಾಗಿರುತ್ತದೆ. ಹಾಗು ಆ ಕೇಂದ್ರೀಕೃತವಾದ ವಿಷಯದಲ್ಲಿ ನಿರಂತರ ಹರಿದಾಡುವುದು ವಿಚಾರವಾಗಿರುತ್ತದೆ.
ವಿತರ್ಕ, ವಿಚಾರದಿಂದಾಗಿ ವಿವೇಕ (ಏಕಾಂತತೆ) ಉಂಟಾಗುತ್ತದೆ. ಅಂದರೆ ವಿತರ್ಕ, ವಿಚಾರದಿಂದಾಗಿ ಪಂಚನಿವರಣಗಳು ಇನ್ನಿಲ್ಲವಾಗಿ ಕೇವಲ ಧ್ಯಾನ ವಿಷಯ ಮಾತ್ರ ಇರುತ್ತದೆ. ನಿವರಣಗಳಿಂದ ಮುಕ್ತವಾದ ಏಕಾಂತ ಆತನು ಅನುಭವಿಸುತ್ತಾನೆ.
ಪೀತಿ (ಆನಂದ):
ಇದು ಉಲ್ಲಾಸ (ಪುನಶ್ಚೇತನ) ಗೊಳಿಸುವುದರಿಂದ ಇದು ಪೀತಿ (ಆನಂದ) ಆಗಿದೆ. ಪೀತಿಯ ಕ್ರಿಯೆ ಎಂದರೆ ಶರೀರ ಹಾಗು ಮನಸ್ಸಿಗೆ ಉಲ್ಲಾಸ ನೀಡುವುದು ಹಾಗು ಪೀತಿಯು ವ್ಯಕ್ತತೆಯು ಉತ್ಸಾಹ, ಔನತ್ಯ ಅಥವಾ ಹಗುರತೆಯಿಂದ ವ್ಯಕ್ತವಾಗುತ್ತದೆ.
ಐದು ವಿಧದ ಪೀತಿಯಿದೆ, ಅವೆಂದರೆ: ಖುದ್ಧಿಕಾ (ಕ್ಷುದ್ರ (ಚಿಕ್ಕ) ರೋಮಾಂಚಕಾರಿ) ಪೀತಿ, ಮಿಂಚಿನಂತೆ ಖಣಿಕಾ (ಕ್ಷಣಿಕ) ಪೀತಿ, ಓಕ್ಕನ್ತಿಕ (ಅಲೆಗಳಂತೆ ಅಪ್ಪಳಿಸುವ) ಪೀತಿ  ಉಬ್ಬೇಗಾ (ಉದ್ವೇಗ) ಪೀತಿ, ಫರಣಾ (ಪ್ರವಹಿಸುವ) ಪೀತಿ.
ಇದರಲ್ಲಿ ಉಬ್ಬೇಗಾ (ಉದ್ವೇಗ) ಪೀತಿ (ಆನಂದ) ಸಾಧಕನಲ್ಲಿ ಹಗುರತೆಯನ್ನುಂಟುಮಾಡಿ ಗಾಳಿಯಲ್ಲಿ ಶರೀರವನ್ನು ತೇಲಾಡಿಸುವಂತೆ ಮಾಡುತ್ತದೆ.

ಉದಾಹರಣೆ - ಮಹಾತಿಸ್ಸ ಥೇರರ ತೇಲುವಿಕೆ

ಮಹಾತಿಸ್ಸ ಥೇರರು ಒಮ್ಮೆ ಪುಣ್ಯವಲ್ಲಿಕಾದಲ್ಲಿ ನೆಲೆಸಿದ್ದರು. ಒಮ್ಮೆ ಮೇಲ್ಭಾಗದ ಭವನಕ್ಕೆ ಹೋಗಿದ್ದಾಗ ಅಂದು ಹುಣ್ಣಿಮೆಯಾಗಿತ್ತು. ಆ ಬೆಳದಿಂಗಳು ಅನುರಾಧಪುರದ ಮಹಾಸ್ತೂಪದ ಮೇಲೆ ಬಿದ್ದು ಆ ಸ್ಥಳವು ಅತಿ ಅದ್ಭುತವಾಗಿ ಕಂಗೊಳಿಸುತ್ತಿತ್ತು. ಓಹ್, ಈ ಸಮಯದಲ್ಲಿ ನಾಲ್ಕು ಗಣಗಳು ಭಿಕ್ಖುಸಂಘ, ಭಿಕ್ಖುಣಿ ಸಂಘ, ಉಪಾಸಕ ಹಾಗು ಉಪಾಸಿಕೆಯರು ಈ ಮಹಾ ಸ್ತೂಪವನ್ನು ಪೂಜಿಸುತ್ತಿರುವುದು ಅತ್ಯಂತ ಆನಂದದಾಯಕವಾಗಿದೆ. ಹೀಗೆ ಅವರು ಯೋಚಿಸುತ್ತಲೇ ಅವರಲ್ಲಿ ಆನಂದ, ಉದ್ವೇಗದಿಂದ ಶರೀರವು ಗಾಳಿಯಲ್ಲಿ ತೇಲಾಡಿತು. ಮಹಾ ಸ್ತೂಪದ ಎತ್ತರಕ್ಕೂ ಅವರು ಹಾರಿ ತೇಲಾಡಿ ಬಳಿಕ ಇಳಿದರು.

ಭಕ್ತಿಯಿಂದ ಬಾಲೆಯ ಹಾರಾಟ:

ಗಿರಿಕಂದಕ ವಿಹಾರದ ಸಮೀಪದ ವತ್ತಕಾಲಕ ಹಳ್ಳಿಯ ಬಳಿ ಒಂದು ಕುಟುಂಬವಿತ್ತು. ಆ ಪೋಷಕರು ಒಮ್ಮೆ ವಿಹಾರಕ್ಕೆ ಹೊರಟಿದ್ದರು. ಅಲ್ಲಿಗೆ ಬರಲು ಹಠ ಹಿಡಿದ ಪುಟ್ಟ ಮಗಳಿಗೆ ಹೀಗೆ ಹೇಳಿದರು: ವತ್ಸೆ, ನೀನಿನ್ನು ಮಗು, ನೀನಿನ್ನು ಇಂತಹ ಅವೇಳೆಯಲ್ಲಿ ಬರಬಾರದು. ನಾವು ಧಮ್ಮವನ್ನು ಆಲಿಸುವೆವು, ನಿನ್ನ ಪುಣ್ಯಕ್ಕೂ ಬೇಡುವೆವು ಎಂದು ನುಡಿದು ಅವರು ವಿಹಾರಕ್ಕೆ ಹೊರಟುಬಿಟ್ಟರು. ಆಗ ಆ ಬಾಲಕಿಯು ಆಕಾಶಚೇತಿಯ ಸ್ವರೂಪವನ್ನು ತನ್ನ ಮನೆಯ ಮಳಿಗೆಯ ಎತ್ತರದ ಕೈಸಾಲೆಯ ಬಳಿ ನಿಂತು ಆ ಬೆಳದಿಂಗಳ ಬೆಳಕಿನಲ್ಲಿ ಆ ಮನೋಹರವಾದ ಆಕಾಶಚೇತಿಯಾವನ್ನು ನೋಡಿದಳು. ನಾಲ್ಕು ಸಮೂಹದವರು ದೀಪಗಳನ್ನು ಹಚ್ಚಿ, ಗಂಧವನ್ನು ಪ್ರಸರಿಸಿ, ಹೂಗಳನ್ನು ಇಡುತ್ತಾ, ಭಿಕ್ಷುಗಳ ವಂದನೆಯ ಸುಮಧುರ ಧ್ವನಿಗಳು ಇವನ್ನೆಲ್ಲಾ ಗಮನಿಸುತ್ತಾ ಆಕೆ ಹೀಗೆ ಯೋಚಿಸಿದಳು: ಓಹ್ ಇಂತಹ ಪರಮ ಅದ್ಭುತ ಸ್ಥಳಕ್ಕೆ ಹೊರಟ ಅವರು ಎಂದಹ ಧನ್ಯರು. ಹಾಗೆಯೇ ಆಕೆಯಲ್ಲಿ ಭಕ್ತಿಯ ಆನಂದವು ಉದ್ವೇಗದಿಂದ ಹಿಗ್ಗಿ, ಶರೀರವು ಹಗುರವಾಗಿ ಗಾಳಿಯಲ್ಲಿ ತೇಲಾಡಿದಳು. ಆಗ ಆಕೆ ಆ ಚೇತಿಯಾದ ಬಳಿ ಹಾರಲು ಇಚ್ಛಿಸಿದಳು. ತಕ್ಷಣ ಹಾಗೆಯೇ ಆಕಾಶ ಮಾರ್ಗದಲ್ಲಿಯೇ ತೇಲುತ್ತಾ ಆ ಚೇತಿಯದ ಬಳಿ ಇಳಿದಳು. ಅಲ್ಲಿ ಚೇತಿಯಕ್ಕೆ ವಂದಿಸಿ, ಧಮ್ಮವನ್ನು ಆಲಿಸಿದಳು. ಆಕೆಯನ್ನು ಅಲ್ಲಿ ಕಂಡ ಆಕೆಯ ತಂದೆ-ತಾಯಿಗಳು ಹೀಗೆ ಕೇಳಿದರು: ನೀನು ಯಾವ ದಾರಿಯಿಂದ ಬಂದೆ? - ಆಕಾಶ ಮಾರ್ಗದಿಂದ ಎಂದು ವಿವರಿಸಿದಳು. ಹೀಗೆ ಉದ್ವೇಗದ ಆನಂದದಿಂದ ಶರೀರವು ಹಗುರವಾಗಿ ತೇಲಾಡುತ್ತದೆ, ಹಾರುತ್ತದೆ.
ಇನ್ನು ಫರಣಾ (ಪ್ರವಾಹ) ಪೀತಿಯ ಉತ್ಪನ್ನವಾದಾಗ ಸಕಲ ಶರೀರವೂ ಆನಂದದಿಂದ ತುಂಬಿಹೋಗುತ್ತದೆ.
ಫರಣ (ಪ್ರವಾಹಿಸುವ) ಆನಂದವೇ ಸಮಾಧಿಗೆ ಮೂಲ:
ಈ ಪಂಚವಿಧದ ಪೀತಿ (ಆನಂದ) ಫಲಿಸಿ ಪಕ್ವವಾದಾಗ, ಪೂರ್ಣವಾದಾಗ ಎರಡು ವಿಧದ ಪ್ರಶಾಂತತೆ (ಪ್ರಸನ್ನತೆ, ಪಸ್ಸದ್ದಿ)ಯು ಉಂಟಾಗುತ್ತದೆ. ಅದೆಂದರೆ: ಕಾಯಿಕ ಪಸ್ಸದ್ದಿ ಹಾಗು ಮಾನಸಿಕ ಪಸ್ಸದ್ದಿ. ಯಾವಾಗ  ಪ್ರಶಾಂತತೆಯು ಪಕ್ವವಾಗಿ, ಪೂರ್ಣವಾದಾಗ ಎರಡು ವಿಧದ ಸುಖವನ್ನು ನೀಡುತ್ತದೆ. ಕಾಯಿಕ ಸುಖ ಮತ್ತು ಮಾನಸಿಕ ಸುಖ. ಯಾವಾಗ ಈ ಸುಖವು ಫಲಿಸಿ, ಪಕ್ವವಾಗಿ, ಪೂರ್ಣವಾದಾಗ ಮೂರು ಬಗೆಯ ಸಮಾಧಿಯನ್ನು ನೀಡುತ್ತದೆ. ಕ್ಷಣಿಕ ಸಮಾಧಿ, ಸಾಮೀಪ್ಯ (ಉಪಚರ) ಸಮಾಧಿ ಮತ್ತು ಸ್ಥಿರ (ಅಪ್ಪಣ) ಸಮಾಧಿ.

ಸುಖ

ಯಾವುದು ಸುಖಕಾರಿಯೋ (ಸುಲಭ) ಅದೇ ಸುಖ. ಸುಲಭವಾಗಿ ಸಹಿಸುವಂತಹುದೇ ಸುಖ. ಯಾವುದು ಶಾರೀರಿಕ ಹಾಗು ಮಾನಸಿಕ ಕ್ಲೇಶಗಳನ್ನು ಸ್ವಾಹ ಮಾಡುತ್ತದೆಯೋ ಅದೇ ಸುಖ. ಆದ್ದರಿಂದಲೇ ಇದನ್ನು ಸುಖ ಎನ್ನಲಾಗಿದೆ. ಸುಖದ ಲಕ್ಷಣವೇನೆಂದರೆ ತೃಪ್ತಿಯಾಗಿರುವಿಕೆ. ಇದರ ಕ್ರಿಯೆ ಸ್ಥಿತಿಗಳನ್ನು ತೀಕ್ಷ್ಣಗೊಳಿಸುವಿಕೆ ಆಗಿದೆ. ಇದರ ಸಹಾಯದಿಂದ ಸುಖವು ವ್ಯಕ್ತವಾಗುತ್ತದೆ.
ಪೀತಿ (ಆನಂದ) ಮತ್ತು ಸುಖವು ಜೊತೆಯಾಗಿರುತ್ತವೆ. ಎಲ್ಲಿ ಆನಂದವಿರುವುದೋ ಅಲ್ಲಿ ಸುಖವಿರುತ್ತದೆ. ಆದರೆ ಸುಖವಿರುವೆಡೆಯಲ್ಲಿ ಆನಂದ ಇರಲೇಬೇಕಿಲ್ಲ. ಆನಂದವು ಸಂಖಾರಗಳ ಅಡಿಯಲ್ಲಿ ಬರುವುದು ಅಂದರೆ ಸುಖವು ವೇದನೆಗಳ ಅಡಿಯಲ್ಲಿ ಬರುವುದು.
ಮರುಭೂಮಿಯಲ್ಲಿ ದಣಿದಿರುವವನಿಗೆ ಸರೋವರ ಕಾಣಿಸುವಿಕೆ ಆನಂದವಾಗಿರುತ್ತದೆ. ಆದರೆ ಆ ನೀರನ್ನು ಸೇವಿಸಿದಾಗ ಅದು ಸುಖ ಆಗಿರುತ್ತದೆ.
ಪ್ರಥಮ ಧ್ಯಾನದಲ್ಲಿ ಆನಂದ (ಪೀತಿ) ಹಾಗು ಸುಖ ಇವೆರಡೂ ಇರುತ್ತವೆ. ನಿವರಣಗಳ ನಾಶದಿಂದ ಉಂಟಾದ ಏಕಾಂತತೆಯಿಂದ ಸಿಗುವ ಆನಂದ ಹಾಗು ಸುಖಗಳು ಎನ್ನುತ್ತಾರೆ.
ಈ ಸುಖವು ಆನಂದದ ಜೊತೆಗೆ ಇದೆ ಎಂದು ವಿಭಂಗದಲ್ಲಿ ಹೇಳಲಾಗಿದೆ.

ಪ್ರಥಮ ಝಾನ ಪ್ರವೇಶ (ಉಪಸಂಪಜ್ಜ): 

ಪ್ರಪ್ರಥಮವಾಗಿ ಪ್ರಥಮ ಝಾನಾವಸ್ಥೆಯನ್ನು ತಲುಪುವಿಕೆ ಪ್ರವೇಶಿಸುವಿಕೆ (ಉಪಸಂಪಾದಿತ್ವ), ಸ್ಪಶರ್ಿಸುವಿಕೆ, ಸಾಕ್ಷಾತ್ಕರಿಸುವಿಕೆ, ಗಳಿಸುವಿಕೆ, ಸಂಪಾದಿಸುವಿಕೆ ಎಂದೆಲ್ಲಾ ಹೇಳಲಾಗಿದೆ.
ಅಂದರೆ ಪ್ರಥಮ ಝಾನವನ್ನು ಸಂಪಾದಿಸಿ, ತಲುಪಿ ವಿಹರಿಸುತ್ತಾನೆ ಎಂದು ಹೇಳಲಾಗುತ್ತದೆ. ವಿಹರಿಸುತ್ತಾನೆ ಎಂದರೆ ಅದರಲ್ಲಿ ತಲ್ಲೀನನಾಗಿರುತ್ತಾನೆ, ಸುಖಿಸುತ್ತಿರುತ್ತಾನೆ, ಆ ಸ್ಥಿತಿಯಲ್ಲೇ ಇರುವಂತೆ ನೋಡಿಕೊಳ್ಳುತ್ತಾನೆ.
ಇಲ್ಲಿ ಆತನು ಐದನ್ನು ವಜರ್ಿಸುತ್ತಾನೆ. ಅದೆಂದರೆ: ಪಂಚನಿರವರಣಗಳು - ಮನಸ್ಸಿನಲ್ಲಿ ಕಾಮ ಇತ್ಯಾದಿ ಇಂದ್ರಿಯಗಳ ಬಯಕೆಗಳಿದ್ದಾಗ ಮನಸ್ಸು ಏಕಾಗ್ರತೆ ವಹಿಸಲಾರದು. ಆ ಮಾರ್ಗದಲ್ಲಿ ಸಹಾ ಇರಲಾರದು. ಅದೇರೀತಿ ಬೇಸರ ಅಥವಾ ದ್ವೇಷವಿದ್ದಾಗ ಭಿಕ್ಖುವು ಭಂಗಗಳಿಲ್ಲದೆ ಸಾಗುವುದಿಲ್ಲ. ಜಡತೆ ಹಾಗು ಸೋಮಾರಿತನವಿದ್ದಾಗ ಚಿತ್ತವು ಸ್ಥೂಲವಾಗಿ ಜಡವಾಗಿ ನಿರ್ವಹಿಸಲಾರದಂತಾಗುತ್ತಾನೆ. ಹಾಗೆಯೇ ಕ್ಷೊಭೆಯಿಂದ ಹಾಗು ಚಿಂತೆ (ಪಶ್ಚಾತ್ತಾಪ) ಗಳಿದ್ದಾಗ ಚಿತ್ತವು ಅಶಾಂತವಾಗುತ್ತದೆ ಹಾಗು ಬುಸುಗುಟ್ಟುತ್ತಿರುತ್ತದೆ ಮತ್ತು ಸಂದೇಹ (ಅನಿಧರ್ಾರ) ವಿದ್ದಾಗ ಮಾರ್ಗದಲ್ಲಿ ಕ್ರಮಿಸುವುದೇ ಅಸಾಧ್ಯವಾಗುತ್ತದೆ. ಹೀಗಾಗಿ ಪರಿತ್ಯಾಗ ಮಾಡಬೇಕಾದ ಐದು ಅಂಗಗಳೆಂದರೆ ಪಂಚನಿವರಣಗಳೇ ಆಗಿವೆ.

ಹೊಂದಿರಬೇಕಾದ ಐದು ಅಂಗಗಳೆಂದರೆ ಐದು ಧ್ಯಾನಾಂಗಗಳು. ಅವೇ ವಿತರ್ಕ, ವಿಚಾರ, ಪೀತಿ, ಸುಖ, ಏಕಾಗ್ರತೆಯಗಳು. 
ವಿತರ್ಕದಿಂದಾಗಿ ಚಿತ್ತವು ಧ್ಯಾನ ವಿಷಯಗಳಿಗೆ ಕೇಂದ್ರೀಕರಿಸುತ್ತದೆ (ಅಂದರೆ ಇಲ್ಲಿ ಪಠವಿ ಕಸಿಣಾ) ವಿಚಾರವು ಚಿತ್ತವನ್ನು ಅಲ್ಲೇ ನೆಲೆಸಿ ಹಿಡಿದಿಟ್ಟುಕೊಳ್ಳುವಂತೆ ಮಾಡುವುದು. ಈ ಪ್ರಯತ್ನದಲ್ಲಿ ಆನಂದ (ಪ್ರಿತಿ)ವು ಉದಯಿಸುವುದು. ಉಲ್ಲಾಸವು ನೆಲೆಸಿ ಚಿತ್ತವು ಚದುರದಂತೆ ಏಕಾಗ್ರತೆಯಿಂದಿರುತ್ತದೆ. ನಂತರ ಸುಖವು ವೃದ್ಧಿಯಾಗುವುದು. ಇವೆಲ್ಲದರ ಸಮನಾದ ಸಮಗ್ರತೆಯೇ ಏಕಾಗ್ರತೆಯಾಗಿದೆ.
ಆಗ ಆತನ ಇಡೀ ಶರೀರವು ಏಕಾಂತ ಸುಖದಿಂದ ಆವೃತವಾಗಿರುತ್ತದೆ. ಸುಖವಿಲ್ಲದ ಸ್ಥಳವೇ ಆತನ ಶರೀರದಲ್ಲಿ ಇರಲಾರದು. ಇಲ್ಲಿ ಏಕಾಗ್ರತೆಯನ್ನು ವಿವರಿಸಿಲ್ಲ. ಅದರ ಬಗ್ಗೆ ಮುಂದೆ ವಿವರಣೆಯಿದೆ. ಇಲ್ಲಿ ವಿತಕ್ಕ, ವಿಚಾರ ಹಾಗು ಪೀತಿಯದ್ದೇ ಮಹತ್ತರ ಪಾತ್ರವಿರುವುದರಿಂದಾಗಿ ಅವನ್ನು ಮಾತ್ರ ವಿವರವಾಗಿ ತಿಳಿಸಲಾಗಿದೆ. 


ತ್ರಿವಿಧ ಕಲ್ಯಾಣಕಾರಿ:

ಮೂರು ವಿಧದಲ್ಲಿ ಕಲ್ಯಾಣಕಾರಿ (ಮಂಗಳಕರ) ಯಾಗಿದೆ. ಹೇಗೆಂದರೆ: ಆರಂಭದಲ್ಲಿ, ಮಧ್ಯದಲ್ಲಿ ಹಾಗು ಅಂತ್ಯದಲ್ಲಿ. ಅಂದರೆ ಆರಂಭದಲ್ಲಿ ಮಾರ್ಗದ ಪರಿಶುದ್ಧಿಯಿಂದ (ಅಂದರೆ ಪಂಚನಿವರಣ ಮುಕ್ತತೆ) ಕೂಡಿರುವ ಪ್ರಥಮ ಧ್ಯಾನವಿದೆ, ಮಧ್ಯದಲ್ಲಿ ಸಮಚಿತ್ತತೆಯ ತೀಕ್ಷ್ಣತೆಯಿದೆ ಅಂದರೆ ಪರಿಶುದ್ಧವಾಗಿರುವುದನ್ನು ಸಮಚಿತ್ತತೆಯಿಂದ ಗಮನಿಸುತ್ತಾನೆ ಹಾಗು ಅಂತ್ಯದಲ್ಲಿ ಸಂತೃಪ್ತಿಯಿದೆ. ಹೇಗೆಂದರೆ: ಇಡೀ ಧ್ಯಾನಂಗಗಳೆಲ್ಲವೂ ಒಂದೇ ಕಾರ್ಯಕ್ಕೆ ಅನುಕೂಲವಾಗುವಂತೆ ನಿರ್ವಹಿಸುತ್ತವೆ. ಇಲ್ಲಿ ಶ್ರಮವು ಪರಿಣಾಮಾತ್ಮಕವಾಗಿ ಯೋಗ್ಯವಾಗಿ ನಡೆದುದಕ್ಕಾಗಿ ಸಂತೃಪ್ತಿ, ಸುಖ ಆನಂದದ ಪುನರಾವರ್ತನೆಯಾಗಿರುವುದರಿಂದಗಿ ಸಂತೃಪ್ತಿ. ಪ್ರಥಮ ಝಾನ ಪಡೆದುದಕ್ಕಾಗಿ ಸಂತೃಪ್ತಿ. ಹೀಗೆ ಮೂರು ವಿಧದಲ್ಲೂ ಕಲ್ಯಾಣಕಾರಿಯಾಗಿದೆ.
ಧ್ಯಾನಿಯು ಪ್ರಥಮ ಝಾನವನ್ನು ಪಠವಿ ಕಸಿಣಾದಲ್ಲಿ ಪ್ರಾಪ್ತಿ ಮಾಡುತ್ತಾನೆ. ಪ್ರಥಮ ಝಾನವೆಂದರೆ: ಸಂಖ್ಯೆಯಲ್ಲಿ ಮೊದಲನೆಯದ್ದಾಗಿ ಪ್ರಥಮವಾಗಿದೆ. ಇವು ಪ್ರಥಮವಾಗಿ ಉದಯಿಸುವುದರಿಂದಾಗಿಯು ಪ್ರಥಮವಾಗಿದೆ. ಝಾನವೆಂದರೆ ವಿಷಯವನ್ನು ಬೆಳಗುವಂತಹುದು, ವಿರೋಧಗಳನ್ನು ಸುಡುವಂತಹುದಾದ (ಝಾಪನ) ಮಣ್ಣಿನ (ಭೂಮಿಯ) ತಟ್ಟೆಗೆ ಪೃಥ್ವಿ ಕಸಿಣಾವೆನ್ನುತ್ತಾರೆ.
ಇಲ್ಲಿ ಧ್ಯಾನಿಯು ಪುನಃ ಪುನಃ ಸಮಾಧಿಯನ್ನು ಪ್ರಾಪ್ತಿಮಾಡುತ್ತಿರುತ್ತಾನೆ. ಪ್ರತಿ ಸಾರಿಯು ಈ ಹಿಂದೆ ಕಳೆದುಕೊಂಡಿದ್ದ ಸ್ಥತಿ ಪುನಃ ಹಿಡಿಯುತ್ತಾನೆ. ಹಾಗು ಅದರ ವ್ಯತ್ಯಾಸ ತಿಳಿಯುತ್ತಿರುತ್ತಾನೆ. ಹೇಗೆಂದರೆ: ಕೂದಲನ್ನು ಕತ್ತಿರಿಸಿ ವಿಶ್ಲೇಷಣೆ ಮಾಡುವವನಂತೆ ಅಥವಾ ನಿಷ್ಣಾತ ಅಡುಗೆಯವನಂತೆ ಕೌಶಲ್ಯದಿಂದ ಕೂಡಿರುತ್ತಾನೆ. ಆತನು ಸಂಕೇತಗಳಲ್ಲಿ ಕುಶಲಿಯಾಗಿದ್ದು ಅದನ್ನು ಅನುಸರಿಸಿ ಸಮಾಧಿ ಪಡೆಯುತ್ತಾನೆ. ಆ ಸ್ಥಿತಿಯಲ್ಲಿಯೇ ಇಡೀ ದಿನವೆಲ್ಲಾ ಇರುತ್ತಾನೆ. ತನಗೆ ತೃಪ್ತಿಯಾಗುವಷ್ಟು ಕಾಲ ಆ ಸ್ಥಿತಿಯಲ್ಲೇ ಇರುತ್ತಾನೆ.

ನಿಮಿತ್ತದ ವಿಕಾಸ (ವರ್ಧನೆ): 

ಚಿತ್ತ ವಿಕಾಸದ ಪೂರ್ಣತೆಗಾಗಿ ಆತನು ಪಟಿಭಾಗನಿಮಿತ್ತ (ಪ್ರತಿಫಲಿತ ಚಿಹ್ನೆ) ವನ್ನು ವಿಕಾಸಿಸಬೇಕಾಗುತ್ತದೆ. ವಿಕಾಸಿಸಲು ಎರಡು ಭೂಮಿಗಳಿವೆ. ಅವೆಂದರೆ: ಉಪಚರ ಮತ್ತು ಅಪಣ್ಣ; ಅಂದರೆ ಸಾಮೀಪ್ಯ ಸಮಾಧಿ ತಲುಪಿದ ನಂತರವೂ ವಿಕಸಿಸಬಹುದು. ಹಾಗೆಯೇ ಸ್ಥಿರ ಸಮಾಧಿಗೆ ತಲುಪಿದ ನಂತರವೂ ವಿಕಸಿಸಬಹುದು.
ಇಲ್ಲಿ ಧ್ಯಾನಿಯು ಮಣ್ಣಿನ ತಟ್ಟೆ ಅಥವಾ ರೊಟ್ಟಿ ಅಥವಾ ಅನ್ನ ಅಥವಾ ಬಳ್ಳಿ ಅಥವಾ ವಸ್ತ್ರ.  ರೀತಿ ಚಿಹ್ನೆಗಳಂತೆ ಕಲ್ಪಿಸಿ ವಿಕಸಿಸಬಾರದು. ಬದಲಾಗಿ ಉಂಟಾಗಿರುವ ಪತಿಭಾಗ ನಿಮಿತ್ತವನ್ನು ಮೊದಲು ಪರಿಮಿತ ಅಳತೆಯಲ್ಲಿ ರಕ್ಷಿಸಿಕೊಳ್ಳಬೇಕು. ಉದಾ: 1 ಬೆರಳು, 2 ಬೆರಳು, ಅಂಗೈಯಷ್ಟು, ಅಷ್ಟು ಸಿದ್ಧಿಯಾದ ಮೇಲೆ ಹೀಗೆಯೇ ಅದರ ಅಳತೆಯನ್ನು ವಿಕಸಿಸಿ ರಕ್ಷಿಸಿ, ಪುನಃ ವಿಕಸಿಸಬೇಕು. ನಂತರ ಹಾಗೆಯೇ ನೇಗಿಲಿನಷ್ಟು ಅಳತೆ, ಅಂಗಳದಷ್ಟು, ವಿಹಾರದಷ್ಟು, ಹಳ್ಳಿಯಷ್ಟು, ನಗರದಷ್ಟು, ಸಾಗರದಷ್ಟು ಹೀಗೆಯೇ ಅನಂತವಾಗಿ ವಿಕಸಿಸಬೇಕು.
ಯಾವಾಗ ಹೊಸಬನು ಪ್ರಥಮ ಝಾನಕ್ಕೆ ಈ ನಿಮಿತ್ತದ ಸಹಾಯದಿಂದಲೇ ಹೋಗುವನೋ ಆತನು ಪದೇ ಪದೇ ಅದನ್ನು ಧ್ಯಾನಾವಸ್ಥೆಯಲ್ಲಿ ಅವಲೋಕಿಸಕೂಡದು. ಆಗ ಧ್ಯಾನಂಗಗಳು ದುರ್ಬಲವಾಗುವ ಸಾಧ್ಯತೆಯಿರುತ್ತದೆ. ಏಕೆಂದರೆ ಅವಲೋಕನದ ಸಮಯದಲ್ಲಿ ಎರಡು ಅಂಗವಿರುತ್ತದೆ. ದ್ವಿತೀಯ ಧ್ಯಾನಕ್ಕೆ ಹೋಗುವುದು ಅಥವಾ ಪ್ರಥಮ ಧ್ಯಾನದಿಂದಲೂ ಕೆಳಬರುವ ಸಾಧ್ಯತೆಯಿರುತ್ತದೆ. ಇದಕ್ಕೆ ಕಾರಣವಿದೆ, ಏನೆಂದರೆ: ಒಂದು ಕಾಲು ಭೂಮಿಯ ಮೇಲೆ ಇಷ್ಟು ನಂತರವೇ ಮತ್ತೊಂದು ಕಾಲನ್ನು ಎತ್ತಬೇಕು ಹೊರತು, ಹಳ್ಳದಲ್ಲಿ ಎರಡು ಕಾಲು ಎತ್ತಿದರೆ ಹಳ್ಳಕ್ಕೆ ಬೀಳುವುದಿಲ್ಲವೆ? ಆದ್ದರಿಂದಾಗಿ ದ್ವಿತೀಯ ಧ್ಯಾನಕ್ಕೆ ಹೋಗಬೇಕಾದರೆ ಮೊದಲು ಅತನು ಐದು ವಿಧದಲ್ಲಿ ವಶಿತ್ವ (ಪ್ರಾವೀಣ್ಯತೆ) ಪ್ರಾಪ್ತಿಮಾಡಬೇಕು.

ಪಂಚವಿಧದ ಧ್ಯಾನ ವಶಿತ್ವ (ನೈಪುಣ್ಯತೆ):

ಪ್ರತಿ ಧ್ಯಾನದ ಹಂತದಲ್ಲೂ ಐದು ರೀತಿ ನೈಪುಣ್ಯತೆ ಸಾಧಿಸಬೇಕಾಗುತ್ತದೆ, ಅದೆಂದರೆ:
1. ಅವಜ್ಜನ ವಸಿ (ಲಕ್ಷ ನೈಪುಣ್ಯತೆ ವಶಿತ್ವ)
2. ಸಮಾವಜ್ಜನ ವಸಿ (ಪ್ರಾಪ್ತಿ ನೈಪುಣ್ಯತೆ ವಶಿತ್ವ)
3. ಅಧಿಟ್ಠಾನ ವಸಿ (ಸಂಕಲ್ಪ ನೈಪುಣ್ಯತೆ ವಶಿತ್ವ)
4. ವುಟ್ಠಾನ ವಸಿ (ನಿರ್ಗಮನ ನೈಪುಣ್ಯತೆ ವಶಿತ್ವ)
5. ಪಚ್ಚವೇಕ್ಖಣ ವಸಿ (ಪುನರ್ ಅವಲೋಕನ ವಶಿತ್ವ).

ಐದು ರೀತಿಯ ಸಮಾಧಿ ನೈಪುಣ್ಯತೆ :

1. ಲಕ್ಷಿಸುವಿಕೆಯಲ್ಲಿ ನೈಪುಣ್ಯತೆ : ಇಲ್ಲಿ ಆತ ಎಲ್ಲಿಯಾದರೂ ಯಾವಾಗ ಲಾದರೂ, ಇಚ್ಛಿಸುತ್ತಿರುವಂತೆ ಧ್ಯಾನ ಗಮನ ಮಾಡುತ್ತಾನೆ.
2. ಪ್ರಾಪ್ತಿ ನೈಪುಣ್ಯತೆ : ಇಲ್ಲಿ ಆತನು ಎಲ್ಲಿಯಾದರೂ, ಯಾವಾಗಲಾದರೂ, ಇಚ್ಛೆಯಂತೆ ಧ್ಯಾನ ಪ್ರವೇಶ ಮಾಡಿ ನೆಲಸುತ್ತಾನೆ.
3. ನಿಧರ್ಾರ ನೈಪುಣ್ಯತೆ : ಇಲ್ಲಿ ಆತ ಎಲ್ಲಿಯಾದರೂ ಯಾವಗಲಾದರೂ ತಾನು ಇಚ್ಛಿಸುವಷ್ಟು ಕಾಲ ಅದೇ ಸಮಾದಿಯಲ್ಲಿ ನೆಲೆಸಿರುತ್ತಾನೆ, ವಿಹರಿಸುತ್ತಾನೆ.
4. ನಿರ್ಗಮನ ನೈಪುಣ್ಯತೆ : ಇಲ್ಲಿ ಆತ ಯಾವಾಗ ಲಾದರೂ ತನ್ನ ಇಚ್ಛೆಯಂತೆ ಧ್ಯಾನದಿಂದ ನಿರ್ಗಮಿಸುತ್ತಾನೆ.
5. ಪುನರಾವಲೋಕನ ನೈಪುಣ್ಯತೆ : ಹಾಗೆಯೇ ಆತನು ಇಡೀ ಧ್ಯಾನವನ್ನು ಪೂರ್ಣವಾಗಿ ಪದೇ ಪದೇ ಪುನಃ ಅವಲೋಕಿಸುತ್ತಾನೆ. ವಿಮಶರ್ಿಸುತ್ತಾನೆ.
ಯಾವಾಗ ಆತನು ಪ್ರಥಮ ಧ್ಯಾನದಿಂದ ಹೊರಬರುತ್ತಾನೋ ಮತ್ತು ಮೊದಲು ವಿತಕ್ಕದ ಕಡೆಗೆ ಗಮನ ನೀಡುತ್ತಾನೆ. ನಂತರ ಗಮನವನ್ನು ಅದಕ್ಕೆ ನೀಡಿದಾಗ ಭವಂಗಕ್ಕೆ ಭಂಗವಾಗುತ್ತದೆ. ವಿತಕ್ಕವನ್ನೇ ಆಲಂಬನೆ ಮಾಡುತ್ತಾ ನಾಲ್ಕು ಅಥವಾ ಐದು ಜವನಗಳ ಪ್ರೇರಣೆಗೊಳ್ಳುತ್ತವೆ. ನಂತರ ಎರಡು ಭವಂಗಗಳು ಆನಂತರ ವಿಚಾರವನ್ನೇ ಆಲಂಬನೆ ಮಾಡುತ್ತಾ ಅವಜ್ಜನವೂ, ಮೇಲಿನಂತೆ ಜವನವೂ ಮುಂದುವರೆಯುತ್ತದೆ. ಈ ವಿಧವಾದ ಸೂಕ್ಷ್ಮ ಪ್ರಕ್ರಿಯೆಯ ಅಭಂಗವಾಗಿ ಐದು ಧ್ಯಾನಂಗಗಳಲ್ಲಿ ಸಾಗಿದರೆ ಆತನ ಲಕ್ಷ್ಯ ನೈಪುಣ್ಯತೆ ವಶಿತ್ವವಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಭಗವಾನರಿಗೆ ಯಮಕ ಪಟಿಹಾರಿಯದ ಅತೀಂದ್ರಿಯ ಶಕ್ತಿಯ ಘಟನೆಯನ್ನು ತೆಗೆದುಕೊಳ್ಳಲಾಗುತ್ತದೆ.
ಮಹಾಮೊಗ್ಗಲ್ಲಾನರು ನಂದೂಪನಂದ ನಾಗ ದಮನದ ಘಟನೆಯನ್ನು ಧ್ಯಾನಕ್ಕೆ ಅತಿ ಕ್ಷಿಪ್ರವಾಗಿ ಪ್ರವೇಶಿಸಿದ್ದನ್ನು ಉದಾಹರಣೆ ನೀಡಿದ್ದಾರೆ. ಧ್ಯಾನದಲ್ಲೇ ಅದರಲ್ಲೂ ಪತಿಭಾಗ ನಿಮಿತ್ತದ ವಿಕಾಸದಲ್ಲಿ ಹಾಗು ಅದರ್ಲೇ ದೀರ್ಘಕಾಲ ನೆಲೆಸುವುದನ್ನು ಸಂಕಲ್ಪ ವೈಶಿಷ್ಟ್ಯತೆಯ ವಶಿತ್ವವೆನ್ನುತ್ತಾರೆ.
ತಕ್ಷಣ ಧ್ಯಾನಸ್ಥಿತಿಯಿಂದ ಕ್ಷಿಪ್ರವಾಗಿ ಹೊರಬರುವುದನ್ನು ನಿರ್ಗಮನ ನೈಪುಣ್ಯ ವಶಿತ್ವ ಎನ್ನುತ್ತಾರೆ.
ಪುನರ್ ಅವಲೋಕನಾ ವಶಿತ್ವವನ್ನು ಈಗಾಗಲೇ ವಿವರಿಸಲಾಗಿದೆ.
ಈ ಪಂಚ ವಿಧದ ವಶಿತ್ವ ಸಿದ್ಧಿಯ ನಂತರ ಅದರಲ್ಲೂ ಪುನರ್ ಅವಲೋಕನ ವಶಿತ್ವದಲ್ಲಿ ಆತನಿಗೆ ವಿತರ್ಕ ಹಾಗು ವಿಚಾರಗಳು ಸ್ಥೂಲವಾಗಿ ಕಂಡುಬರುತ್ತವೆ. ಆಗ ಆತನಿಗೆ ಇದಕ್ಕಿಂತಲೂ ಸೂಕ್ಷ್ಮವಾದ ವಿಚಾರ ವಿತರ್ಕಗಳಿಲ್ಲದ ಸಮಾಧಿಯು (ದ್ವಿತೀಯ) ಹಿತಕರವಾಗಿ ಉನ್ನತವಾಗಿ, ಸೂಕ್ಷ್ಮತರವಾಗಿ ಕಂಡುಬರುತ್ತದೆ. ಅಂದರೆ ಪೀತಿ ಸುಖ ಹಾಗು ಏಕಾಗ್ರತೆಯಿರುವುದು ಸಮಾಧಿಯೇ (ದ್ವಿತೀಯ) ಉತ್ತಮವಾಗಿ ಗೋಚರಿಸುತ್ತದೆ. ಹೀಗಾಗಿ ಅತನಲ್ಲಿ ಕಸಿಣಾದ ನಿಮಿತ್ತದಲ್ಲೇ ಮನೋದ್ವಾರ ಗಮನದಿಂದಲೇ ಪ್ರಯತ್ನವು ಸಾಗುತ್ತದೆ. ಆಗ ಭವಂಗದ ಭಂಗವಾಗಿ ನಾಲ್ಕು ಅಥವಾ ಐದು ಜವನದ ಪ್ರೇರಣೆಯಿಂದ ವೇಗವೂ ಸಾಗಿ ಕೊನೆಯ ಜವನದಿಂದ (ಪ್ರೇರಣೆ/ಝಾನ) ರೂಪವಚರ ಕ್ಷೇತ್ರ (ಸಮಾಧಿ ಲೋಕ) ಪ್ರವೇಶಿಸುತ್ತದೆ.


ದ್ವಿತೀಯ ಝಾನ:

ಇಲ್ಲಿ ಧ್ಯಾನಿಯು ವಿತಕ್ಕ ವಿಚಾರಗಳನ್ನು ಸ್ತಬ್ಧಗೊಳಿಸಿ ದ್ವಿತೀಯ ಧ್ಯಾನಕ್ಕೆ ಪ್ರವೇಶಿಸಿ ವಿಹರಿಸುತ್ತಾನೆ. ಅದು ವಿತಕ್ಕ ವಿಚಾರಗಳಿಲ್ಲದೆ, ಚಿತ್ತದ ಏಕೋಭಾವದಿಂದ ಹಾಗು ಒಳಶ್ರದ್ಧೆಯಿಂದ ಕೂಡಿದ, ಏಕಾಗ್ರತೆಯಿಂದ ಉದಯಿಸಿದ ಸಮಾಧಿ ಆಗಿರುತ್ತದೆ. ಹೀಗೆ ಆತನು ದ್ವಿತೀಯ ಝಾನ ಪ್ರಾಪ್ತಿಮಾಡುತ್ತಾನೆ. ಅದು ಎರಡು ಧ್ಯಾನಂಗಗಳನ್ನು ತೊರೆದಿರುತ್ತದೆ ಹಾಗು ಮೂರು ಧ್ಯಾನಂಗಗಳನ್ನು ಹೊಂದಿರುತ್ತದೆ ಹಾಗು ಅದು ತ್ರಿವಿಧದಲ್ಲಿ ಕಲ್ಯಾಣಕಾರಿಯಾಗಿರುತ್ತದೆ ಮತ್ತು 10 ಲಕ್ಷಣಗಳನ್ನು ಹೊಂದಿರುತ್ತದೆ.
ಇಲ್ಲಿ ಸಾಧಕನು ಪ್ರಥಮ ಧ್ಯಾನದಂತೆ ಯಾವುದೇ ಕ್ಲೇಶಗಳ ಜೊತೆ ಹೋರಾಡಬೇಕಿಲ್ಲ. ಅದೆಲ್ಲವೂ ಈ ಹಿಂದೆ ಪ್ರಥಮ ಧ್ಯಾನದಲ್ಲೇ ತೊರೆದು ಹೋಗಿರುತ್ತದೆ. ಆದರೆ ಇಲ್ಲಿ ಸ್ಥೂಲವಾಗಿರುವ ವಿತರ್ಕ ಹಾಗು ವಿಚಾರಗಳನ್ನು ಸ್ತಬ್ಧಗೊಳಿಸಿ ಅವುಗಳನ್ನು ಅತಿಕ್ರಮಿಸಿ, ಆ ಸ್ಥೂಲ ಸ್ಥಿತಿಯನ್ನು ದಾಟಿ, ಅಂತಹ ಅಡ್ಡಿಗಳನ್ನು ತೊಂದರೆಗಳನ್ನು ಸ್ತಬದ್ಧಗೊಳಿಸಿದ್ದರಿಂದಾಗಿ ಅಪಾರ ಶ್ರದ್ಧೆ ತಾಳಿದವನಾಗುತ್ತಾನೆ. ಆತನ ಶ್ರದ್ಧೆಯು ಅಚಲವಾಗಿರುತ್ತದೆ.

ಏಕಾಗ್ರತೆ : 

ಪಾಲಿಯಲ್ಲಿ ಏಕಾಗ್ಗತ ಎನ್ನುತ್ತಾರೆ. ಏಕ ಎಂದರೆ ಅದ್ವಿತೀಯತೆ, ಉಪೆತಿ ಎಂದರೆ ಸಮೀಪಿಸುವುದು. ಹೀಗಾಗಿ ಇದು ಏಕೋದಿ ಅಂದರೆ ಏಕ, ಅಂದರೆ ಪರಮ ಏಕ ವಿತರ್ಕ ವಿಚಾರಣೆಗೆ ಸಿಲುಕದಷ್ಟು ಉನ್ನತಿಗೇರಿರುತ್ತದೆ. ಆದ್ದರಿಂದಲೇ ಅದ್ವಿತೀಯ ಎನ್ನುವರು. ಯಾವಾಗ ಇದು ವಿತರ್ಕ ವಿಚಾರಗಳ ಸಂಬಂಧದಿಂದ ಬಿಡುಗಡೆ ಪಡೆದಿದ್ದುದರಿಂದಾಗಿ ಇದನ್ನು ಏಕ, ಅದ್ವಿತೀಯ ಎನ್ನುವೆವು. ಏಕೈಕ ಪ್ರೇರಣಾತ್ಮಕವಾಗಿದೆ, ಏಕಾಂತಕ್ಕೆ ಹಾಗು ಏಕತೆ ನೀಡುವಂತಹದ್ದಾಗಿದೆ. ಆದರೆ ನೆನಪಿರಲಿ, ಈ ಏಕಸ್ಥಿತಿಯು ಜೀವಿಯಲ್ಲ, ಆತ್ಮವೂ ಅಲ್ಲ, ಕೇವಲ ಚಿತ್ತದ ಏಕೋಭಾವವಾಗಿದೆ.
ಪ್ರಥಮ ಝಾನದಲ್ಲಿ ವಿತಕ್ಕ ವಿಚಾರಗಳಿದ್ದರೆ ಪ್ರಭಾವದಿಂದಾಗಿ ಶ್ರದ್ಧೆಯು ಉಂಟಾಗಿರಲಿಲ್ಲ. ಹೇಗೆಂದರೆ ನೀರಿನಲ್ಲಿ ಅಲೆಗಳಿರುವಂತೆ, ಹಾಗೆಯೇ ಏಕಾಗ್ರತೆಯು ಸಹಾ, ಇಲ್ಲಿ ಅಭಂಗ ಏಕಾಗ್ರತೆ ಅನುಭವಿಸಬಹುದಾಗಿದೆ.
ಇಲ್ಲಿ ಶ್ರದ್ಧೆ ಬಂದಿರುವುದಕ್ಕೆ ಕಾರಣವೇನೆಂದರೆ ಕ್ಲೇಶರಹಿತತೆ ಅಲ್ಲಿ ಬದಲಾಗಿ ವಿತರ್ಕ ವಿಚಾರ ಸ್ತಬ್ಧವಾಗಿರುವುದಕ್ಕಾಗಿ ಹಾಗು ಚಿತ್ತ ಏಕಾಗ್ರತೆಯು ಇಲ್ಲಿ ಲಭಿಸಿರುವುದು ನಿವರಣಗಳ ತೊರೆಯುವಿಕೆಯಿಂದಾಗ ಅಲ್ಲ ಅಥವಾ ಝಾನಂಗಗಳ ಸ್ಥಾಪನೆಯಿಂದಲೂ ಅಲ್ಲ. ಬದಲಾಗಿ ವಿತಕ್ಕ ವಿಚಾರಗಳ ಸ್ಥಬ್ಧತೆಯಿಂದಾಗಿದೆ. ಇಲ್ಲಿ ಏಕಾಗ್ರತೆಯು ಏಕಾಗ್ರತೆ ಎಂದು ಕರೆಸಿಕೊಳ್ಳಲು ಅರ್ಹವಾಗಿದೆ. ಏಕೆಂದರೆ ವಿತಕ್ಕ ವಿಚಾರಗಳಿಲ್ಲದೆ ಅಚಲವಾದ ಏಕಾಗ್ರತೆಯು ಸ್ಥಾಪಿತವಾಗಿರುತ್ತದೆ. ಹೀಗಾಗಿಯೇ ಶ್ರದ್ಧೆಯು ಅಧಿಕವಾಗಿರುತ್ತದೆ.
ಈ ಸಮಾಧಿಯು ಎರಡು ಅಂಗಗಳಾದ ವಿತರ್ಕ ಹಾಗು ವಿಚಾರಗಳನ್ನು ತೊರೆದಿರುತ್ತದೆ ಹಾಗು ಮೂರು ಧ್ಯಾನಗಳನ್ನು ಹೊಂದಿರುತ್ತದೆ. ಅದೆಂದರೆ ಪೀತಿ, ಸುಖ ಮತ್ತು ಏಕಾಗ್ಗತ.
ನಂತರ ಧ್ಯಾನಿಯು ಈ ಹಿಂದಿನಂತೆಯೇ ಐದು ವಿಧಗಳ ಧ್ಯಾನ ವಶೀಕೃತಿಯಲ್ಲಿ ವಶಿತ್ವ ಪಡೆಯುತ್ತಾನೆ. ಹೇಗೆಂದರೆ: ಧ್ಯಾನದಲ್ಲಿ ಲಕ್ಷ್ಯಹರಿಸಿ, ಧ್ಯಾನದಲ್ಲಿ ಪ್ರವೇಶಿಸಿ ಸಂಕಲ್ಪಿಸಿ ಅಪಾರ ವೇಳೆಯೊಂದಿಗೆ ಅಲ್ಲಿ ನೆಲೆಸಿ, ನಿರ್ಗಮಿಸಿ, ಅವನೆಲ್ಲಾ ಸ್ಮೃತಿಯಿಂದ, ಎಚ್ಚರಿಕೆಯಿಂದ ಪುನರ್ ಅವಲೋಕಿಸುತ್ತಾನೆ. ಆಗ ಆತನಿಗೆ ಪ್ರೀತಿಯು (ಆನಂದವು) ಸ್ಥೂಲವಾಗಿ ಗೋಚರವಾಗುತ್ತದೆ. ಹೀಗಾಗಿ ಪೀತಿ (ಆನಂದ) ರಹಿತವಾದ ಸುಖ ಹಾಗು ಏಕಾಗ್ರತೆಯೊಂದಿಗೆ ಕೂಡಿದ ತೃತೀಯ ಧ್ಯಾನವೇ ಸೂಕ್ಷ್ಮವಾಗಿ, ಉದಾತ್ತವಾಗಿ, ಉತ್ತಮವಾಗಿ, ಶಾಂತವಾಗಿ, ಉನ್ನತವಾಗಿ ಗೋಚರವಾಗುತ್ತದೆ.
ಹೀಗಾಗಿ ಆತನ ಮನಸ್ಸು ತೃತೀಯ ಝಾನಕ್ಕೆ ಗಾಳ ಹಾಕುತ್ತದೆ. ಪಠವಿ ಕಸಿಣಾದ ತೃತೀಯ ಝಾನವು ಮನೋದ್ವಾರ ಗಮನದ ಮೂಲಕವಾಗಿ ಚಾಲನವಾಗಿ, ಭವಂಗಕ್ಕೆ ಭಂಗವಾಗುತ್ತದೆ. ನಂತರ ನಾಲ್ಕು ಅಥವಾ ಐದು ಜವನ (ಪ್ರೇರಣೆ)ಗಳು ಅದೇ ನಿಮಿತ್ತದ ಮೇಲೆ ವೇಗೀಕರಿಸಿ, ಕೊನೆಯದಾದ ಜವನವು ತೃತೀಯ ಝಾನ ಕ್ಷೇತ್ರಕ್ಕೆ ಪ್ರವೇಶಿಸುತ್ತದೆ.


ತೃತೀಯ ಝಾನ

ಈ ಸ್ಥಿತಿಯಲ್ಲಿ ಆತನ ಝಾನದಲ್ಲಿದ್ದ ಆನಂದವೆಲ್ಲಾ ಮೇರೆಯಾಗಿ ಸಮಚಿತ್ತತೆ (ಉಪೇಕ್ಖ) ಯಲ್ಲಿ ನೆಲೆಸಿದವನಾಗಿ, ಸ್ಮೃತಿ ಹಾಗು ಎಚ್ಚರಿಕೆಯಿಂದ ಕೂಡಿದವನಾಗಿ, ತನ್ನ ಶರೀರವೆಲ್ಲಾ ಸುಖವನ್ನು ಅನುಭವಿಸದವನಾಗಿ, ಆತನು ತೃತೀಯ ಧ್ಯಾನವನ್ನು ಪ್ರವೇಶಿಸುತ್ತಾನೆ. ಅದರ ಬಗ್ಗೆ ಆರ್ಯರು ಹೀಗೆ ಘೋಷಿಸಿರುವರು ಅದೆಂದರೆ: ಎಚ್ಚರಿಕೆ ಹಾಗು ಸಮಚಿತ್ತತೆ ಹೊಂದಿರುವ ಆತನು ಸುಖದಲ್ಲಿ ವಿಹರಿಸುತ್ತಾನೆ ಮತ್ತು ಆತನು ತೃತೀಯ ಝಾನವನ್ನು ಪ್ರಾಪ್ತಿಮಾಡುತ್ತಾನೆ. ಅದು ಒಂದು ಅಂಗವನ್ನು (ಪೀತಿ) ತೊರೆದಿರುತ್ತದೆ ಹಾಗು ಎರಡು ಅಂಗಗಳಿಂದ (ಸುಖ ಮತ್ತು ಏಕಾಗ್ಗತ) ಕೂಡಿರುತ್ತಾನೆ. ಈ ಧ್ಯಾನವು ಸಹಾ ಮೂರು ವಿಧದಲ್ಲಿ ಕಲ್ಯಾಣಕಾರಿಯಾಗಿರುತ್ತದೆ ಮತ್ತು 10 ಲಕ್ಷಣಗಳಿಂದ ಕೂಡಿರುತ್ತದೆ.
ಇಲ್ಲಿ ಧ್ಯಾನಿಯು ಆನಂದದಲ್ಲಿ ವಿರಾಗ (ವೈರಾಗ್ಯ) ತಾಳುತ್ತಾ, ಸಮಚಿತ್ತತೆ ಸಾಧಿಸಿದವನಾಗಿ ಆ ಮಹತ್ತರ ಆನಂದದಲ್ಲೂ ಮತ್ತನಾಗದೆ, ಎಚ್ಚರಿಕೆ ಸಾಧಿಸಿದವನಾಗಿ ಆನಂದ (ಪೀತಿ)ವನ್ನು ಅತಿಕ್ರಮಿಸದವನಾಗಿ ತೃತೀಯ ಧ್ಯಾನದಲ್ಲಿ ತಲ್ಲೀನವಾಗುತ್ತಾನೆ. ಸಮಚಿತ್ತತೆಯಲ್ಲಿ ವಿಹರಿಸುತ್ತಾನೆ. ಅಲ್ಲಿನ ಆಗುಹೋಗುವಿಕೆಗಳನ್ನು ಯಾವುದೇ ಪಕ್ಷಪಾತವಿಲ್ಲದೆ, ಏರಿಳಿತವಿಲ್ಲದೆ, ಹಿಗ್ಗದೆ ಅಥವಾ ಕುಗ್ಗದೆ ನಯವಾದ ಚಿತ್ತದಿಂದ ವೀಕ್ಷಿಸುತ್ತಾನೆ.

10 ವಿಧದ ಸಮಚಿತ್ತತೆ (ಉಪೇಕ್ಖ)

1. ಆರು ಅಂಗಗಳ ಸಮಚಿತ್ತತೆ: ಇಲ್ಲಿ ಧ್ಯಾನಿಯು ಆರು ಇಂದ್ರಿಯಗಳಾದ ಚಕ್ಷು, ಕಿವಿ, ಮೂಗು, ನಾಲಿಗೆ ಹಾಗು ಶರೀರದಲ್ಲಿ ಯಾವುದೇ ರೀತಿಯ ಪ್ರಿಯ ಅಥವಾ ಅಪ್ರಿಯ ವೇದನೆ ತಾಳಲಾರನು.
2. ಬ್ರಹ್ಮವಿಹಾರ ಉಪೇಕ್ಖಾ (ಬ್ರಹ್ಮವಿಹಾರದ ಸಮಚಿತ್ತತೆ)
3. ಉಪೇಕ್ಖಾ ಸಂಬೋಧಿ ಅಂಗ (ಭೋಜ್ಝಾಂಗ ಉಪೇಕ್ಖ)
4. ವೀರಿಯ ಉಪೇಕ್ಖ (ಪ್ರಯತ್ನಶೀಲತೆಯಲ್ಲಿ ಸಮತೋಲನ)
5. ಸಂಖಾರುಪೇಕ್ಖ (ಸಂಖಾರಗಳಲ್ಲಿ ಸಮಚಿತ್ತತೆ)
6. ವೇದನಾನುಪೇಕ್ಖ (ವೇದನೆಗಳಲ್ಲಿ ಸಮಚಿತ್ತತೆ)
7. ವಿಪಸ್ಸನುಪೇಕ್ಖ (ಧ್ಯಾನದಲ್ಲಿ ವೀಕ್ಷಿಸುತ್ತ ತೊರೆದು ಸಮಚಿತ್ತತೆ)
8. ತಂತ್ರಮಜ್ಝತ್ತುಪೇಕ್ಖ (ನಿಧರ್ಿಷ್ಟ ಸಮಚಿತ್ತತೆ)
9. ಝಾನುಪೇಕ್ಖಾ (ಧ್ಯಾನದ ಸಮಚಿತ್ತತೆ)
10. ಪಾರಿಸುದ್ದುಪೇಕ್ಖ (ಪರಿಶುದ್ಧಿಗೊಳಿಸುವ ಸಮಚಿತ್ತತೆ). (ಪರಿಪಕ್ವಗಳನ್ನು ಸಮಚಿತ್ತತೆಯಿಂದ ಶುದ್ಧಗೊಳಿಸುವಿಕೆ).

ಇವಕ್ಕೆಲ್ಲಾ ಒಂದೇ ಅರ್ಥವಿದೆ. ಅದೆಂದರೆ: ಸಮಚಿತ್ತತೆ ಸಾಧಿಸುವುದು. ಆದರೂ ಅವುಗಳ ಕ್ರಿಯೆಯ ಕ್ಷೇತ್ರಕ್ಕೆ ಅನುಸಾರವಾಗಿ ಹೀಗೆ ವಿಭಾಗಿಸಲಾಗಿದೆ. ಆದರೂ ವೀರಿಯ ಉಪೇಕ್ಖಾ ಹಾಗು ವೇದಾನಾನುಪೇಕ್ಖದಲ್ಲಿ ಕ್ರಿಯೆಯು ವ್ಯತ್ಯಾಸವಿದೆ. ಮೊದಲನೆಯದು ಸಮತೋಲನವಾದರೆ, ಎರಡನೆಯದು ಸಮಚಿತ್ತತೆಯಾಗಿದೆ.
ಆದರೆ ಇಲ್ಲಿ ಝಾನುಪೇಕ್ಖಾ (ಧ್ಯಾನದಲ್ಲಿ ಸಮಚಿತ್ತತೆ)ಗೆ ಆಯ್ಕೆ ಮಾಡಬೇಕು. ಅದಕ್ಕೆ ಒತ್ತು ನೀಡಬೇಕು. ಉಪೇಕ್ಖದ ಲಕ್ಷಣವೆಂದರೆ ತಟಸ್ಥತೆ. ಅದರ ಕ್ರಿಯೆಯೆಂದರೆ ಸಂಬಂಧಪಡದಿರುವಿಕೆ ಆಗಿದೆ. ಇದು ವ್ಯಕ್ತವಾಗುವುದು ಅನಾಸಕ್ತಿಯಿಂದ. ಇದಕ್ಕೆ ತಕ್ಷಣದ ಕಾರಣ ಆನಂದದಿಂದ ವಿರಾಗ ತಾಳುವಿಕೆ.
ಆತನು ಸ್ಮೃತಿ ಹಾಗು ಸಂಪಜಾನದಲ್ಲಿರುತ್ತಾನೆ. ಅಂದರೆ ಇಲ್ಲಿ ಸ್ಮೃತಿ ಎಂದರೆ ನೆನಪಿಸಿಕೊಳ್ಳುವುದು. ಅಂದರೆ ಪಠವಿ ಕಸಿಣಾವನ್ನು ಅಥವಾ ಪತಿಭಾಗ ನಿಮಿತ್ತವನ್ನು ನೆನೆಸಿಕೊಳ್ಳುವುದು. ಹೀಗಾಗಿ ನೆನಪಿಸಿಕೊಳ್ಳುವುದರಿಂದ (ಸರತಿ) ಆತನು ಸ್ಮೃತಿವಂತ (ಸತ); ಆತನು ಪೂರ್ಣವಾಗಿ ಎಚ್ಚರಿಕೆಯಿಂದಿರುತ್ತಾನೆ (ಸಂಪಜಾನತಿ) ಹೀಗಾಗಿ ಆತನು ಜಾಗೃತ (ಸಂಪಜಾನ). ಈ ಸ್ಮೃತಿ ಹಾಗು ಜಾಗೃತಿಯನ್ನು ವ್ಯಕ್ತಿತ್ವದ ಲಕ್ಷಣಗಳೆನ್ನುತ್ತಾರೆ.

ಸ್ಮೃತಿ:

 ಸ್ಮೃತಿಯ ಲಕ್ಷಣವೇನೆಂದರೆ ನೆನೆಯುವಿಕೆ. ಸ್ಮೃತಿಯ ಕ್ರಿಯೆ ಎಂದರೆ ಮರೆಯದಿರುವಿಕೆ. ಸ್ಮೃತಿಯು ರಕ್ಷಣೆಯಿಂದ ವ್ಯಕ್ತವಾಗುತ್ತದೆ.

ಸಂಪಜಾನ: 

ಸಂಪಜಾನ (ಪೂರ್ಣ ಜಾಗೃತಿ) ದ ಲಕ್ಷಣವೇನೆಂದರೆ ಗೊಂದಲರಹಿತತೆ, ಸಂಪಜಾನದ ಕ್ರಿಯೆ ಎಂದರೆ ನಿರ್ಣಯ ತಾಳುವುದು. ಸಂಪಜಾನವು ಪರಿಶೋಧನೆಯಿಂದ ವ್ಯಕ್ತವಾಗುವುದು.
ಯಾರು ಸ್ಮೃತಿಹೀನನೋ (ಮರೆಯುವಂತಹವನೋ) ಆತನು ಸಾಮಿಪ್ಯ ಸಮಾಧಿಯನ್ನು ಸಹಾ ಪ್ರಾಪ್ತಿ ಮಾಡಲಾರ. ಇನ್ನು ಸ್ಥಿರ ಸಮಾಧಿಯ ಬಗ್ಗೆ ಹೇಳುವುದು ಏನನ್ನು?
ಈ ಸಮಾಧಿಗಳಲ್ಲಿ ಹರಿತವಾದ ಕತ್ತಿಯಂತೆ ಜಾಗ್ರತೆಯು ಉತ್ಕೃಷ್ಟಮಟ್ಟದ್ದಾಗಿರುತ್ತದೆ. ಇಲ್ಲದೆ ಹೋದರೆ ಆನಂದದ ದಿವ್ಯತೆಗೆ ಮಾರುಹೋಗಿ ಕೆಳಮಟ್ಟದ ಧ್ಯಾನಾವಸ್ಥೆಗೆ ಜಾರಬೇಕಾಗುತ್ತದೆ.
ಈ ಸಮಾಧಿಯಲ್ಲಿ ಆತನು ಸುಖವನ್ನು ಇಡೀ ಶರೀರದಲ್ಲೆಲ್ಲಾ ಆನಂದಿಸುತ್ತಾನೆ. ಆತನು ಮಾನಸಿಕ ಶರೀರದಲ್ಲಿ (ಸೂಕ್ಷ್ಮ ಶರೀರ) ಸುಖವನ್ನು ಅನುಭವಿಸುತ್ತಾನೆ.
ಸ್ಮೃತಿ ಹಾಗು ಸಮಚಿತ್ತತೆ ಹೊಂದಿರುವವರು ಅನುಭವಿಸುವಂತಹ ಸುಖದಲ್ಲಿ ಆತನು ವಿಹರಿಸುತ್ತಾನೆ ಸುಖವಿಹಾರಿ ಎಂದು ಆರ್ಯರು ಆತನಿಗೆ ಶ್ಲéಾಘಿಸುತ್ತಾರೆ. ಆತನು ಶ್ಲಾಘನೆಗೆ ಯೋಗ್ಯವಾಗಿರುತ್ತಾನೆ. ಹೇಗೆಂದರೆ: ತೃತೀಯ ಝಾನದಲ್ಲಿ ಸಿಗುವಂತಹ ಸುಖವು ಅತ್ಯಂತ ದಿವ್ಯವಾಗಿ ಮಧುರವಾಗಿರುತ್ತದೆ. ಆದರೂ ಸಹಾ ಎಚ್ಚರಿಕೆ ಕಳೆದುಕೊಳ್ಳದೆಯೇ ಸಾಕ್ಷಿಭೂತವಾಗಿ ಗಮನಿಸುವ ಆತನ ಸಾಧನೆ ಕಡಿಮೆಯೇನಲ್ಲ.
ಈ ಸಮಾಧಿಯು ಒಂದು ಅಂಗವನ್ನು ತೊರೆದಿರುತ್ತದೆ. ಅದೆಂದರೆ: ಆನಂದ (ಪೀತಿ). ಹಾಗು ಎರಡು ಅಂಗಗಳನ್ನು ಹೊಂದಿರುತ್ತದೆ. ಅದೆಂದರೆ: ಸುಖ ಮತ್ತು ಏಕಾಗ್ರತೆ. ಆದರೆ ಪರೋಕ್ಷವಾಗಿ ಸ್ಮೃತಿ, ಜಾಗರೂಕತೆ, ಸಮಚಿತ್ತತೆ ಪ್ರಮುಖಪಾತ್ರ ವಹಿಸುತ್ತದೆ.
ನಂತರ ಧ್ಯಾನಿಯು ಈ ತೃತೀಯ ಧ್ಯಾನದಲ್ಲಿ ಐದು ವಿಧದ ಪ್ರಾವೀಣ್ಯತೆ ಸಾಧಿಸಿ ಪಂಚವಶಿತ್ವ ಸಾಧಿಸುತ್ತಾನೆ. ಹೇಗೆಂದರೆ: ಕ್ಷಿಪ್ರವಾಗಿ ಲಕ್ಷ್ಯ ಸಾಧಿಸಿ, ವೇಗವಾಗಿ ಧ್ಯಾನಸ್ಥಿತಿಯಲ್ಲಿ ಪ್ರವೇಶಿಸಿ, ಆ ಸ್ಥಿತಿಯಲ್ಲಿ ದೀರ್ಘಕಾಲ ಉಳಿಯುವಂತೆ ಸಂಕಲ್ಪಿಸಿ ನೆಲೆಸಿ, ಕ್ಷಿಪ್ರವಾಗಿ ನಿರ್ಗಮಿಸಿ ನಂತರ ಆ ಸ್ಥಿತಿಯನ್ನು ಜಾಗರೂಕತೆಯಿಂದ ಪುನರ್ ಅವಲೋಕಿಸುತ್ತಾ, ವಿಶ್ಲೇಷಿಸುತ್ತಾ, ಈ ನಿಧರ್ಾರಕ್ಕೆ ಬರುತ್ತಾನೆ. ಅದೆಂದರೆ ಸುಖವು ಸಹಾ ಸ್ಥೂಲವಾಗಿ ಕಂಡುಬರುತ್ತದೆ. ಹೀಗಾಗಿ ಸುಖವಿಲ್ಲದ, ಸಮಚಿತ್ತತೆಯಿಂದ ಮತ್ತು ಏಕಾಗ್ರತೆಯಿಂದ ಕೂಡಿದಂತಹ ಚತುರ್ಥ ಸಮಾಧಿಯು ಆತನಿಗೆ ಸೂಕ್ಷ್ಮವಾಗಿ, ಉನ್ನತವಾಗಿ, ಕಾಣಿಸುತ್ತದೆ. ಹೀಗಾಗಿ ಆತನು ಪಠವಿ ಕಸಿಣಗಳಲ್ಲೇ ಮನಸ್ಸು ಇರಿಸಿ, ಸುಖದಲ್ಲಿ ವಿರಕ್ತನಾಗಿ ಸಮಚಿತ್ತತೆ ಹಾಗು ಏಕಾಗ್ರತೆಯುತ ಚತುರ್ಥದೆಡೆಗೆ ಗಾಳಹಾಕುತ್ತಾನೆ. ಆಗ ಮನೋದ್ವರ ಅವಜ್ಜನ (ಗಮನ) ದೊಂದಿಗೆ ಈ ಕ್ರಿಯೆಯು ಆರಂಭವಾಗುತ್ತದೆ. ಆಗ ಭವಂಗವು ಭಂಗವಾಗಿ, ನಂತರ ನಾಲ್ಕು ಅಥವಾ ಐದು ಜವನಗಳು ಅದೇ ವಿಷಯದ ಮೇಲೆ ಪ್ರೇರೇಪಿಸುತ್ತವೆ. ನಂತರ ಕೊನೆಯ ಜವನದೊಂದಿಗೆ ನಾಲ್ಕನೆಯ ಝಾನದ ರೂಪವಚರ ಕ್ಷೇತ್ರಕ್ಕೆ ಪ್ರವೇಶಿಸುತ್ತಾನೆ. ಉಳಿದಿದ್ದು ಹಿಂದಿನಂತೆಯೇ ನಡೆಯುವುದು. ಆದರೆ ಒಂದು ವ್ಯತ್ಯಾಸವಿದೆ. ಇಲ್ಲಿ ಸುಖವು ಕಾರಣೀಯವಲ್ಲ, ಸುಖವೂ ಅಲ್ಲದ ದುಃಖವೂ ಅಲ್ಲದ ಉಪೇಕ್ಷೆಯೇ ಪ್ರಾಥಮಿಕ ಕ್ರಮವೇ ಕಾರಣೀಯವಾಗುತ್ತದೆ. ಇಲ್ಲಿ ಉಪೇಕ್ಷೆಯಿಂದಾಗಿ ಸುಖದ ಮರೆಯಾಗುತ್ತದೆ.


ಚತುರ್ಥ ಧ್ಯಾನ (ಝಾನ): 

ಇಲ್ಲಿ ಧ್ಯಾನಿಯು ಪಠವಿ ಕಸಿಣಾದಲ್ಲಿ ಸುಖವನ್ನು ಹಾಗು ನೋವನ್ನು ಬಿಟ್ಟವನಾಗಿ ಮತ್ತು ತನ್ನ ಹಿಂದಿನ ಆನಂದ ಹಾಗು ದುಃಖಗಳನ್ನು ಬಿಟ್ಟು ಚತುರ್ಥ ಝಾನದಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ. ಅದು ನೋವು ಅಲ್ಲದ ನಲಿವು ಅಲ್ಲದ ಮತ್ತು ಸಮಚಿತ್ತತೆಯಿಂದಾಗಿ ಸ್ಮೃತಿಯ ಶುದ್ಧಿಯನ್ನು ಹೊಂದಿರುತ್ತದೆ ಮತ್ತು ಹೀಗೆ ಆತನು ಚತರ್ುರ್ಥ ಝಾನವನ್ನು ಪ್ರಾಪ್ತಿಮಾಡುತ್ತಾನೆ. ಆ ಸ್ಥಿತಿಯು ಒಂದು ಅಂಗವನ್ನು ವಜರ್ಿಸಿರುತ್ತದೆ ಹಾಗು ಎರಡು ಅಂಗಗಳನ್ನು ಹೊಂದಿರುತ್ತದೆ. ಅದು ತ್ರಿವಿಧ ಕಲ್ಯಾಣಕಾರಿಯಾಗಿರುತ್ತದೆ. 10 ಲಕ್ಷಣಗಳನ್ನು ಹೊಂದಿರುತ್ತದೆ.
ಸುಖ ಮತ್ತು ದುಃಖಗಳನ್ನು ಬಿಟ್ಟವನಾಗಿ, ನೋವು-ನಲಿವಿನ ಮರೆಯುವಿಕೆ ನಂತರ.... ಇಲ್ಲಿ ಯಾವ ಸುಖ ದುಃಖಗಳು ಬಂದವು ಎಂಬ ಪ್ರಶ್ನೆ ಏಳುವುದು ಸಹಜವಾಗಿದೆ. ಆದರೆ ಇಂದ್ರೀಯ ವಿಭಂಗದ ಪ್ರಕಾರ ಸಾಮಿಪ್ಯ ಸಮಾಧಿಯಿಂದ ಇಲ್ಲಿಯವರೆಗೆ ನಡೆದ ಪ್ರತಿಯೊಂದರ ಪರಿಗಣನೆ ತೆಗೆದುಕೊಂಡು ಹೀಗೆ ಹೇಳಲಾಗಿದೆ. ಹಾಗು ಈ ಹಿಂದಿನ ಪರಿಗಣನೆ ಮಾಡಿ ಹೀಗೆ ಹೇಳಿದ್ದಾರೆ.
ಆ ಧ್ಯಾನದ ಸ್ಥಿತಿಯಲ್ಲಿ ನೋವು ನಲಿವು ಎರಡು ಇರಲಾರದು. ಇಲ್ಲಿ ಸಮಚಿತ್ತತೆ ಮಾತ್ರವಲ್ಲ. ಧ್ಯಾನಿಗೆ ಶಾರೀರಿಕ ನೋವು-ನಲಿವು ತಾಕಲಾರವು ಹಾಗು ಸಮಚಿತ್ತತೆಯು ಆಳವಾಗಿ ಸ್ಥಾಪಿತವಾಗಿರುತ್ತದೆ. ಇದರ ಲಕ್ಷಣವೇನೆಂದರೆ ಪ್ರಿಯ-ಅಪ್ರಿಯಗಳಿಗೆ ಅತೀತವಾದುದನ್ನು ಅನುಭವಿಸುವುದು. ಇದರ ಕ್ರಿಯೆ ತಟಸ್ಥವಾಗಿದ್ದು, ಅಸ್ಪಷ್ಟತೆಯಿಂದ ವ್ಯಕ್ತವಾಗುತ್ತದೆ. ಇದರ ತತ್ಕ್ಷಣದ ಕಾರಣವು ವಿರಾಗವಾಗಿದೆ.

ಸಮಚಿತ್ತತೆಯಿಂದಲೇ ಸ್ಮೃತಿಯ ಪರಿಶುದ್ಧಿಯಾಗುವುದು:

ಈ ಸ್ಮೃತಿಯು ಸ್ಪಷ್ಟವಾಗುವುದು, ಪರಿಶುದ್ಧವಾಗುವುದು, ನಿರ್ಮಲವಾಗುವುದು ಉಪೇಕ್ಷೆ (ಸಮಚಿತ್ತತೆ) ಯಿಂದಲೇ ಆಗಿದೆ. ಆದ್ದರಿಂದಲೇ ಈ ಹೇಳಿಕೆ ನೀಡಲಾಗಿದೆ. ಕೇವಲ ಸ್ಮೃತಿಯೊಂದೇ ಶುದ್ಧವಾಗುವುದಿಲ್ಲ, ಜೊತೆಗೆ ಅದರ ಸಹಸ್ಥಿತಿಗಳು ಸಹಾ ಶುದ್ಧಗೊಳ್ಳುತ್ತದೆ.
ಈ ಧ್ಯಾನದಲ್ಲಿ ಒಂದು ಅಂಗವು (ಸುಖ) ಬಿಡಲಾಗುತ್ತದೆ ಹಾಗು ಎರಡು ಅಂಗಗಳನ್ನು ಹೊಂದಿರುತ್ತದೆ. ಅದೆಂದರೆ: ಸಮಚಿತ್ತತೆ ಹಾಗು ಏಕಾಗ್ರತೆ.
ಇಲ್ಲಿಯೂ ಧ್ಯಾನಿಯು ಧ್ಯಾನದ ಐದು ಪ್ರಾವೀಣ್ಯತೆಗಳಲ್ಲಿ ವಶಿತ್ವ ಪಡೆಯುತ್ತಾನೆ.
ಪಂಚ ವಿಧದ ಸಮಾಧಿ:
ಇಲ್ಲಿ ಧ್ಯಾನಿಗೆ ಪಂಚನಿವರಣಗಳನ್ನು ವಜರ್ಿಸಿ ಪ್ರಥಮ ಝಾನ ಪಡೆಯುತ್ತಾನೆ. ಆಗ ಧ್ಯಾನದಲ್ಲಿ ಪಂಚ ವಶಿತ್ವ ಪಡೆದ ನಂತರ ಆತನಿಗೆ ವಿತಕ್ಕ ಮಾತ್ರ ಸ್ಥೂಲವಾಗಿ ಕಾಣಿಸಿ ಆತನು ವಿತಕ್ಕ ಮೀರಿದ ದ್ವಿತೀಯ ಝಾನ ಪಡೆಯುತ್ತಾನೆ....
ಹಾಗೆ ಮುಂದಿನ ಹಂತದಲ್ಲಿ ವಿಚಾರ ಮೀರಿದ ತೃತೀಯ ಝಾನ ಪಡೆಯುತ್ತಾನೆ....
ಹಾಗೆ ಮುಂದಿನ ಹಂತದಲ್ಲಿ ಪೀತಿ ಮೀರಿದ ಚತುರ್ಥ ಧ್ಯಾನ ಪಡೆಯುತ್ತಾನೆ....
ಹಾಗೇ ಮುಂದಿನ ಹಂತದಲ್ಲಿ ಸುಖ ಮೀರಿದ ಉಪೇಕ್ಖಾ ಹಾಗು ಏಕಾಗ್ಗತೆಯಿಂದ ಕೂಡಿದ ಪಂಚಮ ಧ್ಯಾನ ಪಡೆಯುತ್ತಾನೆ.
ಅಂದರೆ ಇಲ್ಲಿ ದ್ವಿತೀಯ ಧ್ಯಾನ ಎರಡು ಭಾಗವಾಗಿ ವಿಂಗಡಿತವಾಗಿರುತ್ತದೆ
.

ಸಜ್ಜನರಿಗೆ ಸುಖ ನೀಡುವ ಉದ್ದೇಶದಿಂದ ರಚಿತವಾದ ವಿಶುದ್ಧಿ ಮಾರ್ಗದಲ್ಲಿನ
ನಾಲ್ಕನೇ ಅಧ್ಯಾಯವಾದ ಪಠವಿ ಕಸಿಣ ನಿದ್ದೇಸ ಮುಗಿಯಿತು. 

No comments:

Post a Comment